Visitors have accessed this post 390 times.
ಸುರತ್ಕಲ್ : ಮಾಜಿ ಶಾಸಕ ಮೊಯ್ದೀನ್ ಬಾವ ಸಹೋದರ ಉದ್ಯಮಿ ಮುಮ್ತಾಜ್ ಆಲಿ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಪೈಕಿ ಪೊಲೀಸ್ ಕಸ್ಟಡಿಯಲ್ಲಿರುವ ಮೂವರನ್ನು ಗುರುವಾರ ಕೃಷ್ಣಾಪುರಕ್ಕೆ ಕರೆ ತಂದು ಮಹಜರು ನಡೆಸಲಾಯಿತು. ಈ ಸಂದರ್ಭ ಆರೋಪಿಗಳ ವಿರುದ್ಧ ಸ್ಥಳೀಯರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಆರೋಪಿಗಳಾದ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಅಬ್ದುಲ್ ಸತ್ತಾರ್, ಬಂಟ್ವಾಳ ಸಜಿಪ ನಂದಾವರದ ಶಾಫೀ ಹಾಗೂ ರಹಮತ್ ಅವರನ್ನು ಕಾವೂರು ಮತ್ತು ಸುರತ್ತಲ್ ಠಾಣೆ ಪೊಲೀಸರು ಗುರುವಾರ ಕೃಷ್ಣಾಪುರದ ಅಬ್ದುಲ್ ಸತ್ತಾರ್ ಮನೆಗೆ ಕರೆತಂದಿದ್ದು, ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಕಾರಣ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರಮುಖ ಆರೋಪಿ ಅಬ್ದುಲ್ ಸತ್ತಾರ್ ಮನೆಗೆ ಈ ಇಬ್ಬರು ಆರೋಪಿಗಳು ಹಾಗೂ ಈ ಪ್ರಕರಣದ ಇನೊಬ್ಬ ಮಹಿಳಾ ಆರೋಪಿ ಆಯಿಷಾ ರೆಹಮತ್ ಭೇಟಿ ನೀಡಿದ್ದರು ಎಂಬ ಕಾರಣದಿಂದ ಮಹಜರು ನಡೆಸಲಾಗಿದೆ ಎಂದುಪೊಲೀಸ್ ಮೂಲಗಳು ತಿಳಿಸಿವೆ. ಮುಮ್ತಾಜ್ ಅಲಿ ರವರು ಕೂಳೂರು ಹಳೆ ಸೇತುವೆಯಿಂದ ಅ.6ರಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೃತದೇಹ ಅ.7ರಂದು ಅದೇ ಸ್ಥಳದಲ್ಲಿ ಪತ್ತೆಯಾಗಿತ್ತು. ಮಹಜರು ನೇತೃತ್ವವನ್ನು ಸುರತ್ಕಲ್ ಪಿಐ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಮತ್ತು ಕಾವೂರು ಠಾಣೆ ಪೊಲೀ ಸರು ವಹಿಸಿದ್ದರು. ಘಟನೆ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಕೃಷ್ಣಾಪುರ ಪರಿಸರದಲ್ಲಿ ಬಂದೋಬಸ್ತ್ ಆಯೋಜಿಸಲಾಗಿದೆ.