Visitors have accessed this post 846 times.
ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಕಿಡಿಗೇಡಿಗಳು ಸಂಭ್ರಮಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹರಿಬಿಟ್ಟು ಆತಂಕ ಸೃಷ್ಟಿಸಿದ್ದಾರೆ.
ನ.12ರಂದು ನೇಜಾರಿನಲ್ಲಿ ನಡೆದ ತಾಯಿ, ಮೂವರು ಮಕ್ಕಳ ಕಗ್ಗೋಲೆಗೆ ಜಾತಿ ಭೇದ ಮರೆತು ಎಲ್ಲರೂ ಮರುಗುತ್ತಿರುವಾಗ ಸಾಮಾಜಿಕ ಜಾಲತಾಣವಾದ ಇನ್ಸಾಗ್ರಾಮ್ ನಲ್ಲಿ ‘ಹಿಂದು ಮಂತ್ರ’ ಎಂಬ ಪೇಜ್ನಲ್ಲಿ ಕೊಲೆ ಆರೋಪಿಯನ್ನು ಸಾಧಕನಂತೆ ಬಿಂಬಿಸಿರುವುದು ಕಂಡುಬಂದಿದೆ.
‘ಹಿಂದು ಮಂತ್ರ’ ಎಂಬ ಇನ್ಸಾಗ್ರಾಮ್ ಪುಟದಲ್ಲಿ ಈ ಬಗ್ಗೆ ‘ಸ್ಟೋರಿ’ ಹಾಕಲಾಗಿದ್ದು “15 ನಿಮಿಷದಲ್ಲಿ 4 ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ” ಎಂಬ ಶೀರ್ಷಿಕೆ ನೀಡಲಾಗಿದೆ. ಅಲ್ಲದೆ, ಆರೋಪಿ ಪ್ರವೀಣ್ ಚೌಗುಲೆ ಫೋಟೋಗೆ ‘ಕಿರೀಟ’ ತೊಡಿಸಿ ವಿಕೃತಿ ಮೆರೆಯಲಾಗಿದೆ. ತಮ್ಮ ಕೃತ್ಯಕ್ಕೂ ಸಮರ್ಥನೆ ನೀಡಿರುವ ಕಿಡಿಗೇಡಿಗಳು ‘ಉಡುಪಿ ಹುಡುಗಿಯರ ವಿಚಾರದಲ್ಲಿ ಯಾರೂ ಬಂದಿಲ್ಲ. ಆದ್ದರಿಂದ, ನಾವೂ ಈ ವಿಚಾರಕ್ಕೆ ಬರುವುದಿಲ್ಲ’ ಎಂದು ಬರೆಯಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.