Visitors have accessed this post 893 times.
ಚಿಕ್ಕಮಗಳೂರು ಶ್ವೇತಾ ಕೊಲೆ ಪ್ರಕರಣ ಪೊಲೀಸರನ್ನೇ ಬೆಚ್ಚಿ ಬೀಳಿಸಿದ್ದು, ಪತಿ ದರ್ಶನ್ ರಾಗಿಮುದ್ದೆಯಲ್ಲಿ ಸೈನೆಡ್ ಬೆರೆಸಿ ಪತ್ನಿ ಶ್ವೇತಾರನ್ನು ಕೊಲೆ ಮಾಡಿದ್ದಾನೆ ಎಂಬುದು ತನಿಖೆ ವೇಳೆ ಬಯಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ದೇವವೃಂದ ಗ್ರಾಮದಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಒಂದು ದಿನದ ನಂತರ ಗೋಣಿಬೀಡು ಪೊಲೀಸರು ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ದಿನದಿಂದ ದಿನಕ್ಕೆ ಪ್ರಕರಣ ಹಲವು ತಿರುವು ಬಿಡುತ್ತಿದೆ. ಶ್ವೇತಾ ಕೊಲೆಗೆ ಪತಿ ದರ್ಶನ್ ಸಹೋದ್ಯೊಗಿ ಕುಮ್ಮಕ್ಕು ನೀಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಪತಿ ದರ್ಶನ್ ಊಟದ ವೇಳೆ ರಾಗಿಮುದ್ದೆಗೆ ಸೈನೆಡ್ ಬೆರೆಸಿದ್ದು, ರಾಗಿಮುದ್ದೆ ಸೇವಿಸಿದ ಪತ್ನಿ ಶ್ವೇತಾ ಮೃತಪಟ್ಟಿದ್ದಾಳೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ತಾಳಿ ಕಟ್ಟಿ ಪತ್ನಿ ಜೊತೆ ಸಪ್ತಪದಿ ತುಳಿದ ಗಂಡ ಪರ ಸ್ತ್ರೀಯ ಮಾತು ಕೇಳಿಕೊಂಡು ಇಂತಹ ಘೋರ ಕೃತ್ಯ ಎಸಗಿದ್ದು, ನಿಜಕ್ಕೂ ಆಘಾತಕಾರಿಯಾಗಿದೆ.
ಮೃತರನ್ನು 31 ವರ್ಷದ ಶ್ವೇತಾ ಎಂದು ಗುರುತಿಸಲಾಗಿದೆ. ಮೃತರು ಪತಿ ದರ್ಶನ್ ಪೂಜಾರಿ ಮತ್ತು 4 ವರ್ಷದ ಮಗನನ್ನು ಅಗಲಿದ್ದಾರೆ. ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿ ದರ್ಶನ್ ಅವರನ್ನು ಬಂಧಿಸಿದ್ದಾರೆ. ಎಫ್ಐಆರ್ನಲ್ಲಿ ದರ್ಶನ್ ಮತ್ತು ಅವರ ಸಹೋದರ ದೀಪಕ್ ಅವರನ್ನು 1 ಮತ್ತು 2 ಆರೋಪಿಗಳೆಂದು ಹೆಸರಿಸಲಾಗಿದೆ. ದರ್ಶನ್ ತಂದೆ ಬಾಬು ಪೂಜಾರಿ ಮತ್ತು ತಾಯಿ ಗೌರಮ್ಮ 3 ಮತ್ತು 4ನೇ ಆರೋಪಿಗಳಾಗಿದ್ದಾರೆ.