
ಮಂಗಳೂರು: ಕರಾವಳಿಯಾದ್ಯಾಂತ ಇಂದು ಈದುಲ್ ಫಿತರ್ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕಳೆದ 29 ದಿನಗಳ ಕಠಿಣ ಉಪವಾಸ ಪೂರೈಸಿದ ಮುಸ್ಲಿಮ್ ಸಮುದಾಯದವರು ಇಂದು ಬೆಳಗ್ಗೆಯೇ ಮಸೀದಿಗಳಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಕೇರಳದ ಪೊನ್ನಾನಿಯಲ್ಲಿ ಮಂಗಳವಾರ ಸಂಜೆ ಚಂದ್ರದರ್ಶನವಾಗುತ್ತು. ಈ ಹಿನ್ನಲೆಯಲ್ಲಿ ಪಶ್ಚಿಮ ಕರಾವಳಿಯುದ್ದಕ್ಕೂ ಇಂದು ಈದ್ ಹಬ್ಬ ಆಚರಿಸಲು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿ ತಾಕ್ವಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದರು. ಈದ್ ಹಬ್ಬದ ಹಿನ್ನಲೆಯಲ್ಲಿ ಹೊಸಬಟ್ಟೆ ಧರಿಸಿ ಮುಸ್ಲಿಮರು ಮಸೀದಿಗಳತ್ತ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಂಗಳೂರು ನಗರದ ಬಾವುಟ ಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಿರಿ – ಕಿರಿಯರೆನ್ನದೆ ಎಲ್ಲರೂ ಬೆಳ್ಳಂಬೆಳಗ್ಗೆ ಮಸೀದಿಯತ್ತ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಎಲ್ಲರೂ ಆಲಿಂಗಿಸಿ ಹಬ್ಬದ ಶುಭಕಾಮನೆಯನ್ನು ಸಲ್ಲಿಸಿದ್ದಾರೆ. ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಅವರು ಬಾವುಟ ಗುಡ್ಡೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ಬಳಿಕ ಮಸೀದಿಗೆ ಆಗಮಿಸಿದ ಜನರಿಗೆ ಹಬ್ಬದ ಶುಭಾಶಯ ಸಲ್ಲಿಸಿದರು.


