Visitors have accessed this post 103 times.
ಮೈಸೂರು: ಕೇಂದ್ರ ಸಚಿವರೇ ವಿಶ್ರಾಂತಿಗಾಗಿ ಬಂದರೂ ಬಾಗಿಲು ಬೀಗ ತೆಗೆಯದೆ ಅಧಿಕಾರಿಗಳು ಅವಮಾನ ಮಾಡಿ ಕಳಿಸಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಕೇಂದ್ರ ಸಚಿವ, ಜೆಡಿಎಸ್ ಮುಖಂಡ ಎಚ್ಡಿ ಕುಮಾರಸ್ವಾಮಿ ಅವರು ಇಂದು ನಂಜನಗೂಡು ಪ್ರವಾಸದಲ್ಲಿದ್ದು, ಕೆಲ ನಿಮಿಷಗಳ ವಿಶ್ರಾಂತಿಗಾಗಿ ನಂಜನಗೂಡು ಪ್ರವಾಸಿ ಮಂದಿರಕ್ಕೆ ತೆರಳಿದ್ದರು.
ಕೇಂದ್ರ ಸಚಿವರ ಭೇಟಿ ವಿಚಾರವನ್ನು ಪ್ರವಾಸಿ ಮಂದಿರದ ಅಧಿಕಾರಿಗಳಿಗೆ ಸಾಕಷ್ಟು ಮೊದಲೇ ತಿಳಿಸಲಾಗಿತ್ತು. ಈ ಬಗ್ಗೆ ಪ್ರವಾಸ ಪಟ್ಟಿಯನ್ನೂ ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ್ದರು. ಆದರೆ ಎಚ್ಡಿಕೆ ತೆರಳುವ ಹೊತ್ತಿಗೆ ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಯಾರೂ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ.
10 ನಿಮಿಷಕ್ಕೂ ಅಧಿಕ ಸಮಯ ಕಾದರೂ ಯಾವುದೇ ಸಿಬ್ಬಂದಿ ಬಾಗಿಲು ತೆಗೆಯಲು ಬರಲಿಲ್ಲ. ಈ ಸಂದರ್ಭದಲ್ಲಿ ಎಚ್ಡಿಕೆ ಕಾರಿನಲ್ಲೇ ಕುಳಿತಿದ್ದರು. ಜೊತೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಅವರೂ ಇದ್ದರು. ಕಾದು ಸುಸ್ತಾದ ಎಚ್ಡಿ ಕುಮಾರಸ್ವಾಮಿ ಬಳಿಕ ಅಲ್ಲಿಂದ ತೆರಳಿದರು.
ಈ ಬಗ್ಗೆ ಸಾ.ರಾ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರು ಬಂದರೂ ಬಾಗಿಲು ತೆರೆಯದೆ ಇರುವುದರ ಹಿಂದೆ ರಾಜ್ಯ ಸರಕಾರದ ಚಿತಾವಣೆ ಇದೆ. ಅವಮಾನ ಮಾಡುವ ಉದ್ದೇಶಕ್ಕಾಗಿಯೇ ಹೀಗೆ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.