Visitors have accessed this post 593 times.
ಸುಳ್ಯ: ಇಲ್ಲಿನ ಬೆಳ್ಳಾರೆಯಲ್ಲಿರುವ ಮಸೀದಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿರುವ ಆರೋಪದಲ್ಲಿ ಮುಸ್ಲಿಂ ಮುಖಂಡನ ವಿರುದ್ಧವೇ ಬೆಳ್ಳಾರೆ ಮಸೀದಿ ಆಡಳಿತ ಮಂಡಳಿ ಪೊಲೀಸ್ ದೂರು ದಾಖಲಿಸಿದೆ. ಬೆಳ್ಳಾರೆಯ ಇಬ್ರಾಹಿಂ ಖಲೀಲ್ ಎಂಬಾತ ತನ್ನ ಫೇಸ್ಬುಕ್ ಪೇಜ್ನಲ್ಲಿ ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಬರೆದು ಪೋಸ್ಟ್ ಮಾಡಿದ್ದ. ಆದ್ದರಿಂದ ಮಸೀದಿ ಆಡಳಿತ ಮಂಡಳಿ ಈತ ಸುಳ್ಳು ದ್ವೇಷದ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದಾನೆ. ಪ್ರವೀಣ್ ನೆಟ್ಟಾರು ಹತ್ಯೆಯನ್ನೂ ಉಲ್ಲೇಖಿಸಿ ಬೆಳ್ಳಾರೆ ಮಸೀದಿಗೆ ತಳುಕು ಹಾಕಿ ಖಲೀಲ್ ಪೋಸ್ಟ್ ಮಾಡಿದ್ದಾನೆ. ಜಾತಿಗಳ ನಡುವೆ ವೈಷಮ್ಯ, ಕೋಮು ಪ್ರಚೋದನೆಯ ರೀತಿಯಲ್ಲಿ ಬರೆದಿದ್ದಾನೆ. ಈತನ ಮೇಲೆ ಕಾನೂನು ಕ್ರಮ ಜರುಗಿದಬೇಕೆಂದು ಬೆಳ್ಳಾರೆ ಜಮಾಅತ್ ಅಧ್ಯಕ್ಷ ಯು. ಹೆಚ್.ಅಬೂಬಕ್ಕರ್ ಹಾಜಿ ದೂರು ನೀಡಿದ್ದಾರೆ. ಆದ್ದರಿಂದ ಮಸೀದಿ ಆಡಳಿತ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಈ ಮಧ್ಯೆ ಇಬ್ರಾಹಿಂ ಖಲೀಲ್ ಪ್ರತಿದೂರು ನೀಡಿದ್ದು,’ತನಗೆ ಬೆಳ್ಳಾರೆಯ ಜಮಾಲ್ ಮತ್ತು ಅಝರುದ್ದೀನ್ ಎಂಬವರಿಂದ ಜೀವ ಬೆದರಿಕೆ ಇದೆ. 2018ರಿಂದ ನನಗೆ ಇವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಅಪರಿಚಿತ ನಂಬರ್ಗಳಿಂದ ಫೋನ್ ಕರೆ ಮಾಡಿ ಬೆದರಿಕೆ ಒಡ್ಡಲಾಗುತ್ತಿದೆ. ಸೆ.27ರಂದು ನಾನು ಬೆಳ್ಳಾರೆಗೆ ಹೋಗಿದ್ದಾಗ ನನ್ನ ಬೈಕನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.