ಬಂಟ್ವಾಳ : ಬೈಕಿನಲ್ಲಿ ತೆರಳುತ್ತಿದ್ದ ಧರ್ಮ ಗುರುಗೆ ಹಿಂದಿನಿಂದ ವ್ಯಕ್ತಿಯೊಬ್ಬ ಕಲ್ಲು ಎಸೆದು ದಾಳಿಗೆ ಯತ್ನ..!

ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿ 2024ರ ಡಿಸೆಂಬರ್ 29ರಂದು ಧಾರ್ಮಿಕ ಆಚರಣೆ ಮುಗಿಸಿ ಹಿಂತಿರುಗುತ್ತಿದ್ದ ಮುಸ್ಲಿಂ ಧರ್ಮಗುರುವಿನ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಕೊಲೆ ಯತ್ನ ನಡೆಸಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಉಪ್ಪಿನಂಗಡಿಯ ಸಿನಾನ್ ಪೈಝಿ ಎಂಬವರು ದಿನಾಂಕ 29.12.2024 ರಂದು ಮಧ್ಯಾಹ್ನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲಿನಲ್ಲಿ ಧಾರ್ಮಿಕ ಆಚರಣೆ ಮುಗಿಸಿ, ತಮ್ಮ ಬೈಕಿನಲ್ಲಿ ಉಪ್ಪಿನಂಗಡಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ತೇಜಾಕ್ಷ ಎಂಬಾತನು ಏಕಾಏಕಿ ಕಲ್ಲನ್ನು ಎತ್ತಿಕೊಂಡು ಸಿನಾನ್ ಪೈಝಿ ಅವರ ಹಿಂಬದಿಯಿಂದ ತಲೆಗೆ ಗುರಿಯಿಟ್ಟು ಬಲವಾಗಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಕಲ್ಲು ತಲೆಗೆ ಬಿದ್ದಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದರೆ, ಆರೋಪಿತ ಎಸೆದ ಕಲ್ಲಿನಿಂದ ಸಿನಾನ್ ಪೈಝಿ ಅವರು ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾರೆ. ಘಟನೆಯ ನಂತರ, ಪಿರ್ಯಾದುದಾರರಾದ ಶಮೀರ್ [31], ಹಾಗೂ ಸಿನಾನ್ ಪೈಝಿ ಅವರು ಆರೋಪಿಯ ಬಗ್ಗೆ ಭಯಗೊಂಡು ಸುಮ್ಮನಿದ್ದರು ಎನ್ನಲಾಗಿದೆ.
ಆದರೆ ಕೊಳತ್ತ ಮಜಲಿನ ಅಬ್ದುಲ್ ರಹಮಾನ್ ಕೊಲೆಯ ಬೆನ್ನಲ್ಲೇ ಹಳೇ ಪ್ರಕರಣಗಳು ಮೇಲೆ ಬರತೊಡಗಿದೆ. ಇದೊಂದು ಸಂಘರ್ಷ ಸೃಷ್ಟಿಸುವ ವ್ಯವಸ್ಥಿತ ಪ್ರಯತ್ನದ ಭಾಗವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ ಈ ಘಟನೆಯ ಸಿಸಿಟಿವಿ ವೀಡಿಯೋ ಕೂಡಾ ಅಬ್ದುಲ್ ರಹಮಾನ್ ಕೊಲೆ ಪ್ರಕರಣದ ಬಳಿಕ ವೈರಲ್ ಆಗಿತ್ತು.

ದಿನಾಂಕ 31.05.2025 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ ನಂಬ್ರ: 58/2025, ಕಲಂ: 110 BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave a Reply