
ಕುಂದಾಪುರ : ಖಾಸಗಿ ಬಸ್ ಹಾಗೂ ಬೈಕ್ ನಡುವಿನ ಮುಖಾಮುಖಿ ಢಿಕ್ಕಿಯಲ್ಲಿ ಬೈಕ್ ಸವಾರ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಲೂರು ಮುಖ್ಯ ರಸ್ತೆಯ ಕೆಂಚನೂರು ಸಮೀಪದ ಮಲ್ಲಾರಿ ತಿರುವಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತ ಯುವಕನನ್ನು ಸಿಗಂಧೂರು ನಿವಾಸಿ ಶರತ್ (25) ಎಂದು ಗುರುತಿಸಲಾಗಿದೆ. ಹೆಮ್ಮಾಡಿಯಿಂದ ಕೊಲ್ಲೂರಿನತ್ತ ತೆರಳುತ್ತಿರುವ ಖಾಸಗಿ ಬಸ್ಗೆ ಕೊಲ್ಲೂರಿನಿಂದ ಕುಂದಾಪುರದತ್ತ ಶರವೇಗದಲ್ಲಿ ತೆರಳುತ್ತಿದ್ದ ಬೈಕ್ ಮುಖಾಮುಖಿ ಢಿಕ್ಕಿಯಾಗಿದೆ. ಢಿಕ್ಕಿಯ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿದ್ದು, ಸವಾರ ಶರತ್ ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಡ್ಯೂಕ್ ಬೈಕ್ನ ರೇಡಿಯೇಟರ್ ಮೇಲೆ ಪೆಟ್ರೋಲ್ ಬಿದ್ದ ಕಾರಣ ಬೈಕ್ಗೆ ಬೆಂಕಿ ತಗುಲಿ ಭಾಗಶಃ ಸುಟ್ಟು ಕರಕಲಾಗಿದೆ.

ಶಂಕರನಾರಾಯಣ ಠಾಣೆಯ ವೃತ್ತನಿರೀಕ್ಷಕ ಜಯರಾಮ್ ಡಿ ಗೌಡ, ಕುಂದಾಪುರ ಸಂಚಾರಿ ಠಾಣೆಯ ಪಿಎಸೈ ಪ್ರಸಾದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
