
ಮಂಗಳೂರು : ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟು ಲಂಚ ಸ್ವೀಕರಿಸುತ್ತಿದ್ದಾಗ (ಯು.ಪಿ.ಓ.ಆರ್) ಮಂಗಳೂರು ಮಿನಿ ವಿಧಾನಸೌಧ ಪಕ್ಕದಲ್ಲಿರುವ ನಗರ ಮಾಪನ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸರ್ವೆಯರ್ ಮತ್ತು ಬ್ರೋಕರ್ ಇಬ್ಬರು ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳೂರಲ್ಲಿ ಜೂ.18 ರಂದು ಸಂಜೆ ನಡೆದಿದೆ.

ಪ್ರಕರಣದ ವಿವಿರ: ದೂರುದಾರ ತಾಯಿ ತನ್ನ ಹೆಸರಿನಲ್ಲಿರುವ ಕಂಕನಾಡಿ ಗ್ರಾಮದ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ಫೆಬ್ರವರಿ 2025 ರಂದು ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದು,ದೂರುದಾರ ತಾಯಿಗೆ ವಯಸ್ಸಾಗಿರುವುದರಿಂದ ದೂರುದಾರ ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಹೋಗಿ ಕಡತದ ಬಗ್ಗೆ ವಿಚಾರಿಸಿರುತ್ತಾರೆ. ಅಲ್ಲಿನ ಸರ್ವೆಯರ್ ನಂದೀಶ್ ನಾಯ್ಕ್ ರವರು ಎಪ್ರಿಲ್ 2025 ರಂದು ಸರ್ವೆ ನಡೆಸಿ ನಂತರ 6,500 ರೂಪಾಯಿ ಲಂಚದ ಹಣವನ್ನು ತಾನು ಸ್ವೀಕರಿಸಿದ್ದು ಹಾಗೂ 20,000 ರೂಪಾಯಿ ಲಂಚದ ಹಣವನ್ನು ಮಂಗಳೂರು ನಗರದ ಬಿಜೈ ನಿವಾಸಿ ದಿವಾಕರ್ ಮಧ್ಯವರ್ತಿಯವರ ಮೂಲಕ ಪಡೆದುಕೊಂಡಿರುತ್ತಾರೆ. ನಂತರ ಸರ್ವೆಯರ್ ನಂದೀಶ್ ರವರು ಬಜಾಲ್ ಮತ್ತು ಕಂಕನಾಡಿ ಗ್ರಾಮದ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ 18,000 ರೂಪಾಯಿ ಲಂಚದ ಹಣವನ್ನು ನೀಡುವಂತೆ ದೂರುದಾರರಿಗೆ ಒತ್ತಾಯಿಸಿರುತ್ತಾರೆ. ಈ ಬಗ್ಗೆ ದೂರುದಾರರು ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸರ್ವೆಯರ್ ನಂದೀಶ್ ನಾಯ್ಕ್ ಮತ್ತು ಮಂಗಳೂರು ನಗರದ ಬಿಜೈ ನಿವಾಸಿ ಬ್ರೋಕರ್ ದಿವಾಕರ್ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಮುಂದುವರಿದು ಸರ್ವೆಯರ್ ನಂದೀಶ್ ರವರು ಜೂನ್ 2025 ರಂದು ದೂರುದಾರರಿಂದ 15,000 ರೂಪಾಯಿ ಲಂಚದ ಹಣವನ್ನು ಬ್ರೋಕರ್ ದಿವಾಕರ್ ಮೂಲಕ ಪಡೆದುಕೊಂಡಿರುತ್ತಾರೆ. ಸರ್ವೆಯರ್ ನಂದೀಶ್ ರವರು ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು 41,500 ರೂಪಾಯಿ ಲಂಚದ ಹಣವನ್ನು ಪಡೆದುಕೊಂಡಿದ್ದು.ಜೂ.18 ರಂದು ದೂರುದಾರರಿಂದ ಹೆಚ್ಚುವರಿಯಾಗಿ 2 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸರ್ವೆಯರ್ ನಂದೀಶ್ ರವರು ದೂರುದಾರರಿಂದ ಇಲ್ಲಿಯವರೆಗೆ ಒಟ್ಟು 43,500 ರೂಪಾಯಿ ಲಂಚದ ಹಣವನ್ನು ಪಡೆದುಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸರ್ವೆಯರ್ ಮೂಲತಃ ಕಾರವಾರ ನಿವಾಸಿ ನಂದೀಶ್ ನಾಯ್ಕ್(38) ಮತ್ತು ಮಂಗಳೂರು ನಗರದ ಬಿಜೈ ನಿವಾಸಿ ಬ್ರೋಕರ್ ದಿವಾಕರ್(56) ಇಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದು. ಬಳಿಕ ಒಬ್ಬರನ್ನು ಕೂಡ ಮಂಗಳೂರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿದ್ದಾರೆ.

ಮಂಗಳೂರು ವಿಭಾಗದ ಲೋಕಾಯುಕ್ತ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ, ಡಿವೈಎಸ್ಪಿ ಸುರೇಶ್ ಕುಮಾರ್.ಪಿ ಮತ್ತು ಡಾ.ಗಾನ.ಪಿ.ಕುಮಾರ್, ಇನ್ಸ್ಪೆಕ್ಟರ್ ಭಾರತಿ.ಪಿ ಮತ್ತು ಚಂದ್ರಶೇಖರ್ ಕೆ.ಎನ್ ಹಾಗೂ ಸಿಬ್ಬಂದಿ ರಾಧಾಕೃಷ್ಣ.ಡಿ.ಎ, ವೈಶಾಲಿ, ಅದರ್ಶ್, ಮಹೇಶ್,ನಾಗಪ್ಪ, ಯತೀಶ್, ರಾಜಶೇಖರ್, ದುಂಡಪ್ಪ,ಗಂಗಣ್ಣ, ವಿವೇಕ್.ವಿ.ಎನ್,ಪ್ರವೀಣ್ ಹೊಸಮಣಿ,ರಾಜಪ್ಪ ಗೋಟಿ, ಸುರೇಂದ್ರ,ಗಾಯತ್ರಿ, ಬಾಲರಾಜ್, ಜಯಶ್ರೀ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.