ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮ: ಪೊಲೀಸರಿಂದ ನೋಟಿಸ್

ಕುಂದಾಪುರ : ನಗರದ ಮೊಗವೀರ ಸಭಾಭವನದಲ್ಲಿ ಜೂ.20ರಿಂದ ಜೂ.22ರವರೆಗೆ ಕುಂದಾಪುರದಲ್ಲಿ ಹಮ್ಮಿಕೊಳ್ಳಲಾದ ‘ಇನ್ನಿಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಷಯದ ಕುರಿತ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮ ಆಯೋಜಕರಿಗೆ ಕುಂದಾಪುರ ಪೊಲೀಸ್ ಠಾಣೆಯಿಂದ ನೋಟಿಸ್ ನೀಡಿದ್ದು ಹಲವು ಅಂಶಗಳನ್ನು ಪಾಲಿಸುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಸೂಲಿಬೆಲೆ ಸ್ಥಾಪಿಸಿದ ಯುವ ಬ್ರಿಗೇಡ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರತಿದಿನ ಸಂಜೆ 6 ಗಂಟೆಗೆ ಚಕ್ರವರ್ತಿ ಸೂಲಿಬೆಲೆ ಅವರು ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ಕಾರ್ಯಕ್ರಮ ದಲ್ಲಿ ಭಾಗಿಯಾಗುವ ಗಣ್ಯರ ಬಗ್ಗೆ ಮತ್ತು ವೇದಿಕೆ ಹಂಚಿಕೊಳ್ಳುವವರ ವಿವರವನ್ನು ನೀಡಬೇಕು. ಉಪನ್ಯಾಸ ನೀಡುವಾಗ ಅನ್ಯ ಧರ್ಮಗಳ ಬಗ್ಗೆ ನೋವಾಗುವ ರೀತಿಯಲ್ಲಿ ಅಥವಾ ದಕ್ಕೆ ಉಂಟಾಗ ದಂತೆ ಉಪನ್ಯಾಸ ನೀಡದಂತೆ ಎಚ್ಚರಿಕೆ ವಹಿಸಬೇಕು. ಉಪನ್ಯಾಸದ ವಿಷಯಕ್ಕೆ ಸಂಬಂಧಪಟ್ಟಂತೆ ಅದರ ವ್ಯಾಪ್ತಿಯಲ್ಲಿ ಮಾತ್ರ ಉಪನ್ಯಾಸ ನೀಡುವುದು ಹೊರತು ಬೇರೆ ರಾಜಕೀಯ ವಿಚಾರವಾಗಿ ಅಥವಾ ರಾಜಕೀಯ ನಾಯಕರ ತೇಜೋವಧೆ ಮಾಡದಂತೆ ನಿಗಾವಹಿಸಬೇಕು. ಕಾರ್ಯಕ್ರಮವನ್ನು ನಿಗದಿತ ಅವಧಿಯಲ್ಲಿ ಪ್ರಾರಂಭಿಸಿ ನಿಗದಿಪಡಿಸದ ಅವಧಿಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು.

ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳು ಶಾಂತಿಯುತವಾಗಿ ವರ್ತಿಸುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಎಷ್ಟು ಜನ ಸಾರ್ವಜನಿಕರು ಭಾಗವಹಿಸುತ್ತಾರೆ ? ಹಾಗೂ ಯಾವ ಯಾವ ಭಾಗ ಗಳಿಂದ ಸಾರ್ವಜನಿಕರು ಭಾಗವಹಿಸುತ್ತಾರೆ? ಎಂಬ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಕಾರ್ಯಕ್ರಮಕ್ಕಾಗಿ ಬಂದ ವ್ಯಕ್ತಿಗಳು ಕಾರ್ಯಕ್ರಮ ಮುಗಿದ ಬಳಿಕ ಕೂಡಲೇ ಶಾಂತಿಯುತವಾಗಿ ಮನೆಗೆ ಹೋಗುವಂತೆ ನೋಡಿಕೊಳ್ಳಬೇಕು. ವಾಹನಗಳ ಸಂಚಾರಕ್ಕೆ ಅಡ್ಡಿಯಾಗಂದೆತ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಧ್ವನಿವರ್ಧಕದ ಬಳಕೆಗೆ ನಿಯಮಾನುಸಾರ ಅನುಮತಿಯನ್ನು ಪಡೆಯಬೇಕು ಹಾಗೂ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಶಾಂತಿಯುತವಾಗಿ ಸೌಹಾರ್ದ ತೆಯಿಂದ ಕಾರ್ಯಕ್ರಮವನ್ನು ನಡೆಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಪೊಲೀಸ್ ಇಲಾಖೆ/ಜಿಲ್ಲಾಡಳಿತವು ಕಾಲಕಾಲಕ್ಕೆ ನೀಡುವ ಸೂಚನೆಯನ್ನು ಪಾಲಿಸಬೇಕು. ಯಾವುದೇ ಕಾನೂನು ಭಂಗ/ಶಾಂತಿಭಂಗ ಉಂಟಾದಲ್ಲಿ ಸಂಘಟಕರನ್ನೇ ಸಂಪೂರ್ಣ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಸಂಘಟಕರಿಗೆ ನೀಡಿದ ನೋಟೀಸಿನಲ್ಲಿ ತಿಳಿಸಲಾಗಿದೆ.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಪತ್ರ

ಚಕ್ರವರ್ತಿ ಸೂಲಿಬೆಲೆ ಅವರ ಉಪನ್ಯಾಸ ಕಾರ್ಯಕ್ರಮದ ಕುರಿತಂತೆ ಪರಿಸರದಲ್ಲಿ ಸೌಹಾರ್ದತೆ ಕೆಡದಂತೆ ಸೂಕ್ತ ಕ್ರಮ ವಹಿಸುವಂತೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ಠಾಣಾಧಿಕಾರಿಯವರಿಗೆ ಪತ್ರ ಬರೆದು ಒತ್ತಾಯಿಸಿದೆ.

ಯುವಬ್ರಿಗೇಡ್ ಎಂಬ ಸಂಸ್ಥೆಯಿಂದ ಮೂರು ದಿನಗಳ ಕಾಲ ’ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಚಾರದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಕುಂದಾಪುರದ ಚಿಕ್ಕನಸಾಲು ರಸ್ತೆಯ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕೋಮುವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿ ಉಪನ್ಯಾಸ ನೀಡಲಿದ್ದಾರೆ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮತ್ತು ಈ ಕುರಿತಾಗಿ ಪ್ಲೆಕ್ಸ್‌ಗಳನ್ನು ಕುಂದಾಪುರ ಪೇಟೆಯಲ್ಲಿ ಅಳವಡಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿಯ ಮೇಲೆ ದ್ವೇಷ ಭಾಷಣ ಮಾಡಿ ಧರ್ಮಗಳ ನಡುವಿನ ಸೌಹಾರ್ದತೆ ಯನ್ನು ಕೆಡಿಸಿದ ಕುರಿತು ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಅವರ ಮೇಲೆ ಹಲವು ಕ್ರಿಮಿನಲ್ ಕೇಸುಗಳು ಕೂಡ ದಾಖಲಾಗಿರುವ ಕುರಿತು ಸುದ್ದಿಪತ್ರಿಕೆಗಳಲ್ಲಿ ವರದಿಯಾಗಿದೆ. ಕುಂದಾಪುರವು ಸೌಹಾರ್ದತೆಗೆ ಹೆಸರಾಗಿರುವ ಸ್ಥಳವಾಗಿದ್ದು ಇಲ್ಲಿ ಶಾಂತಿ ನೆಲೆಸಿದೆ. ಆದ್ದರಿಂದ ಈ ಚಕ್ರವರ್ತಿ ಸೂಲಿಬೆಲೆ ಪ್ರಚೋದನಕಾರಿ ಭಾಷಣ ಮಾಡಿದ್ದಲ್ಲಿ ಇಲ್ಲಿ ಶಾಂತಿ ಸೌಹಾರ್ದತೆ ಕೆಡುವ ಸಾಧ್ಯತೆಯಿದೆ ಎಂದಿದ್ದಾರೆ.

ಪೊಲೀಸರ ನೋಟೀಸಿಗೆ ಸೂಲಿಬೆಲೆ ಟೀಕೆ

ತಮ್ಮ ಉಪನ್ಯಾಸ ಕಾರ್ಯಕ್ರಮದ ಕುರಿತಂತೆ ಕುಂದಾಪುರ ಪೊಲೀಸರು ಸಂಘಟಕರಿಗೆ ನೀಡಿರುವ ನೋಟೀಸಿನ ಕುರಿತಂತೆ ಚಕ್ರವರ್ತಿ ಸೂಲಿಬೆಲೆ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ವ್ಯಂಗ್ಯ ಭರಿತ ಟೀಕೆ ಮಾಡಿದ್ದಾರೆ.

‘ಇವರು ಮತ್ತೆ ವರಾತ ಶುರು ಮಾಡಿದರು. ನಾನು ಕುಂದಾಪುರಕ್ಕೆ ಹೋಗಬಾರದಂತೆ, ಅಲ್ಲಿನ ಜನರೊಡನೆ ಮಾತನಾಡಬಾರದಂತೆ. ಇದೊಂದು ಅಘೋಷಿತ ಗಡಿಪಾರು ಮಾಡಿಸುವ ಪ್ರಯತ್ನ. ಅವರ ಮಾತು ಕೇಳಿ ಪೊಲೀಸರೊಂದು ನೋಟೀಸು ಬೇರೆ ಜಾರಿ ಮಾಡಿದ್ದಾರೆ.’ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನನಗೇನು ಇದು ಹೊಸತಲ್ಲ. ಉದ್ರೇಕಿಸುವ ಭಾಷಣ ಮಾಡಬಾರದೆಂದು ಬಹಳ ಕಡೆಗಳಲ್ಲಿ ಕೊಟ್ಟಿದ್ದಾರೆ. ಆದರೆ ಈ ಬಾರಿ ರಾಜಕೀಯ ಮಾತನಾಡಬಾರದು ಮತ್ತು ಯಾವುದೇ ನಾಯಕರ ತೇಜೋವಧೆ ಮಾಡ ಬಾರದೆಂದು ಸೇರಿಸಿದ್ದಾರೆ. ಅದರರ್ಥ ನೆಹರೂ, ಇಂದಿರಾ, ರಾಜೀವ್, ಇವರ ಕುರಿತಂತೆ ಮಾತನಾಡ ಬಾರದು ಎಂತಲೋ ಘಜ್ನಿ, ಘೋರಿ, ಔರಂಗಜೇಬರಂತಹ ಕ್ರೂರಿಗಳ ತೇಜೋವಧೆ ಮಾಡಬಾರ ದೆಂತಲೋ! ನನಗಂತೂ ಗೊತ್ತಾಗಿಲ್ಲ. ರಾಜಕೀಯ ಮಾತನಾಡಬಾರದೆನ್ನುವುದು ಕರ್ನಾಟಕದಲ್ಲಿ ಎಂದಿನಿಂದ ಜಾರಿಯಾಯ್ತು ಎನ್ನುವುದರ ಬಗ್ಗೆ ಕೂಡ ಕುಂದಾಪುರದ ಪೊಲೀಸರು ಮಾಹಿತಿ ಕೊಟ್ಟರೆ ಒಳ್ಳೆಯದ್ದು ಎಂದು ಅವರು ಬರೆದುಕೊಂಡಿದ್ದಾರೆ.

Leave a Reply