ಧರ್ಮದ ಆಧಾರದ ಮೇಲೆ ಹತ್ಯೆಗೊಳಗಾದ ಅಶ್ರಫ್ ಮತ್ತು ಅಬ್ದುಲ್ ರಹ್ಮಾನ್‌ರಿಗೆ ನ್ಯಾಯ ಕೋರಿ ಎಸ್.ಐ.ಓ ದ.ಕ. ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಪ್ರತಿಭಟನೆ

ಮಂಗಳೂರು : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (SIO) ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ದಕ್ಷಿಣ ಕನ್ನಡ ವಿಭಾಗವು ಇತ್ತೀಚೆಗೆ ಧರ್ಮದ ಆಧಾರದಲ್ಲಿ ಕೇರಳದ ಅಶ್ರಫ್ ಮತ್ತು ಕರ್ನಾಟಕದ ಅಬ್ದುಲ್ ರಹ್ಮಾನ್ ಎಂಬವರ ಹತ್ಯೆಯ ಪ್ರಕರಣಗಳಲ್ಲಿ ಶೀಘ್ರ ನ್ಯಾಯ ಒದಗಿಸಬೇಕೆಂಬ ಕೋರಿಕೆಯೊಂದಿಗೆ ಇಲ್ಲಿನ ಕ್ಲಾಕ್ ಟವರ್ ಬಳಿ ಶಾಂತಿಯುತ ಪ್ರತಿಭಟನೆ ನಡಸಿತು. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ರಾಜ್ಯ ಸರಕಾರವು ಸ್ಪಷ್ಟ ಮತ್ತು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟಕರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸೋಲಿಡಾರಿಟಿ ಮೂವ್ಮೆಂಟ್ ಕೇರಳ ರಾಜ್ಯಾಧ್ಯಕ್ಷ ತೌಫಿಕ್ ಮಂಬಾಡ್ ಅವರು ಅಶ್ರಫ್ ಅವರ ಗುಂಪು ಹತ್ಯೆಯ ಬಗ್ಗೆ ಸವಿವರವಾಗಿ ಮಾತನಾಡಿ ಅಬ್ದುಲ್ ರಹ್ಮಾನ್ ಅವರ ಹತ್ಯೆಯ ಕುರಿತು ಧ್ವನಿಗೂಡಿಸಿದರು . ಅವರು ಕೇರಳ ಮತ್ತು ಕರ್ನಾಟಕದ ಜನತೆ ಒಂದಾಗಿ ಇಂತಹ ಹಿಂಸೆಯ ವಿರುದ್ಧ ಎದ್ದು ನಿಲ್ಲಬೇಕೆಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಅಮೃತ್ ಶೆಣೈ ಅವರು ಮಾತನಾಡುತ್ತಾ, ಯಾವುದೇ ವ್ಯಕ್ತಿಯು ಧರ್ಮದ ಹೆಸರಿನಲ್ಲಿ ಅಥವಾ ಇನ್ನಾವುದೇ ಕಾರಣಕ್ಕೂ ಹಿಂಸೆಗೆ ಒಳಗಾಗಬಾರದೆಂದು ತಿಳಿಸಿದರು. ಅವರು ಕಾನೂನು ಬಲವರ್ಧನೆ ಮತ್ತು ಸರ್ವಧರ್ಮೀಯರ ಸಹಬಾಳ್ವೆಯ ಅಗತ್ಯತೆಗಳನ್ನು ಒತ್ತಿ ಹೇಳಿದರು.

ಬಳಿಕ ಅಶ್ರಫ್ ಅವರ ಸಹೋದರ ಜಬ್ಬಾರ್ ಅವರು ಪೊಲೀಸರು ತನಿಖೆ ಆರಂಭಿಸಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿ, SIO ನ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ಹೇಳಿದರು.

ಆನಂತರ ವೆಲ್ಫೇರ್ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಮುನೀರ್ ಪದ್ರಂಗಿ ಅವರು ಬಜರಂಗದಳವನ್ನು ನಿಷೇಧಿಸಬೇಕೆಂದು ಮತ್ತು ಎರಡು ಕುಟುಂಬಗಳಿಗೂ ತಲಾ ₹50 ಲಕ್ಷ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯ ಕೊನೆಯಲ್ಲಿ SIO ಕರ್ನಾಟಕ ರಾಜ್ಯ ಕಾರ್ಯದರ್ಶಿ ಆಸಿಫ್ ಡಿ ಕೆ ಅವರು, ರಾಜ್ಯ ಸರ್ಕಾರವು ಸಮುದಾಯಗಳ ನಡುವೆ ಶಾಂತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಅವರು ಅಬ್ದುಲ್ ರಹ್ಮಾನ್ ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು ಮತ್ತು ₹50 ಲಕ್ಷ ಪರಿಹಾರದ ಕೂಗು ಪುನರಾವರ್ತಿಸಿದರು.

Leave a Reply