
ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದ್ಮಾಬಾಯಿ(45) ಎಂಬವರು ಸೋಂಟ ನೋವಿನಿಂದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಜೂ.18ರಂದು ರಾತ್ರಿ ತಂಗಿ ಶಿಲ್ಪಾ ಎಂಬವರು ಪದ್ಮಾಬಾಯಿಯೊಂದಿಗೆ ಮಾತನಾಡಿದಾಗ ಸೊಂಟ ನೋವು ಆಗುತ್ತಿದೆ ಎಂದು ಹೇಳಿದ್ದರು.

ರಾತ್ರಿ ಪದ್ಮಾಬಾಯಿರವರ ಮಗ ಈಶ, ಶಿಲ್ಪಾರವರಿಗೆ ಕರೆ ಮಾಡಿ ತಾಯಿಗೆ ಸೌಖ್ಯವಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಕಳುಹಿಸುವಂತೆ ತಿಳಿಸಿದ್ದರು. ಅದರಂತೆ ಶಿಲ್ಪಾ ಆನ್ಲೈನ್ ಮೂಲಕ ಹಣ ಕಳುಹಿಸಿದ್ದರು. ಜೂ.19ರಂದು ಬೆಳಗ್ಗೆ ಈಶಾ, ಶಿಲ್ಪಾ ಅವರಿಗೆ ಕರೆ ಮಾಡಿ, ತಾಯಿ ಬೆಳಗ್ಗೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದರು.

ಹಾಗೆ ಶಿಲ್ಪಾ ಆಸ್ಪತ್ರೆಗೆ ಬಂದು ನೋಡಿದಾಗ ಪದ್ಮಬಾಯಿ ಅವರ ಕುತ್ತಿಗೆ ಬಳಿ ಕೆಂಪಾಗಿದ್ದು ಕುತ್ತಿಗೆಯನ್ನು ಒತ್ತಿದ ರೀತಿ ಕಂಡುಬಂದಿದೆ. ಅವರ ಮರಣದಲ್ಲಿ ಸಂಶಯ ಇರುವುದಾಗಿ ಶಿಲ್ಪಾ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.