August 25, 2025
WhatsApp Image 2025-07-28 at 9.17.55 AM

ಮಂಗಳೂರು: ಉರ್ವ ಠಾಣೆಯಲ್ಲಿ 2014ರಲ್ಲಿ ಆರ್ಮ್ಸ್ ಆ್ಯಕ್ಟ್‌ನಡಿ ದಾಖಲಾಗಿದ್ದ ಶೂಟೌಟ್ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿದ್ದು, 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಗಣೇಶ ಲಕ್ಷ್ಮಣ್ ಸಕಟ್ ಎಂಬಾತನನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿ ಸಹಚರನಾಗಿದ್ದ ಈತ 2014ರಲ್ಲಿ ಉರ್ವ ಠಾಣೆ ವ್ಯಾಪ್ತಿಯ ಬಿಜೈನ ಭಾರತಿ ಬಿಲ್ಡ‌ರ್ ಕಚೇರಿಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. 2015ರಿಂದ ವರ್ಷದಿಂದ ತಲೆಮರೆಸಿಕೊಂಡಿದ್ದ ಈತನನ್ನು ಮಹಾರಾಷ್ಟ್ರದ ಪಂಡರಾಪುರದಿಂದ ಉರ್ವ ಠಾಣಾ ಎಎಸ್‌ಐ ವೇಣುಗೋಪಾಲ್ ಮತ್ತು ಸಿಬಂದಿಯವರಾದ ಪ್ರಮೋದ್, ನಾರಾಯಣ, ಗೋವಿಂದರಾಜ್ ಅವರು ದಸ್ತಗಿರಿ ಮಾಡಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈತನ ವಿರುದ್ಧ ಕಾವೂರು ಠಾಣೆಯಲ್ಲಿಯೂ ಅಪರಾಧ ಪ್ರಕರಣ ದಾಖಲಾಗಿದ್ದು, ಜೆಎಂಎಫ್‌ಸಿ 3ನೇ ನ್ಯಾಯಾಲಯ ದಸ್ತಗಿರಿ ವಾರಂಟ್‌ ಹೊರಡಿಸಿತ್ತು. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾಡ್‌ ನಗರ ಠಾಣೆಯಲ್ಲೂ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಜಾಮೀನು ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply