

ಬಜ್ಪೆ: ಹಿಂದೂ ಜಾಗರಣ ವೇದಿಕೆಯ ಮುಖಂಡ ಹಾಗೂ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ರವರ ಆಪ್ತ ಸಮಿತ್ ರಾಜ್ ಅಲಿಯಾಸ್ ಸಮಿತ್ ರಾಜ್ ಧರೆಗುಡ್ಡೆ ವಿರುದ್ಧ ಯುವತಿಯೋರ್ವಳಿಗೆ ಲೈಂಗಿಕ ದೌರ್ಜನ್ಯ ಎಸಗಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಆರೋಪದ ಮೇಲೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಶನಿವಾರ (ಸೆ. 27) ಪ್ರಕರಣ ದಾಖಲಾಗಿದೆ.
ಏನಿದು ಆರೋಪ?
ಸಂತ್ರಸ್ತ ಯುವತಿ ನೀಡಿರುವ ದೂರಿನ ಪ್ರಕಾರ, ಆರೋಪಿ ಸಮಿತ್ ರಾಜ್ 2023ರಲ್ಲಿ ಆಕೆಯ ಕುಟುಂಬದ ಕಷ್ಟಕ್ಕೆ ನೆರವಾಗುವ ನೆಪದಲ್ಲಿ ಸಂಪರ್ಕ ಬೆಳೆಸಿದ್ದಾನೆ. ನಂತರ ಪ್ರೀತಿ ಮಾಡುವ ನೆಪದಲ್ಲಿ ಆಕೆಗೆ ನಿರಂತರವಾಗಿ ಕಿರುಕುಳ ನೀಡಿದ್ದಾನೆ.
ದೂರಿನಲ್ಲಿ ತಿಳಿಸಿರುವಂತೆ, 2023ರ ಮಾರ್ಚ್ 23ರಂದು ಸಮಿತ್ ರಾಜ್ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು, ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ನಗ್ನ ಫೋಟೋಗಳಿಗೆ ಒತ್ತಾಯ:
ಇದಾದ ಬಳಿಕವೂ ಆಕೆ ಒಪ್ಪದಿದ್ದಾಗ, ಅವಳ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನ ಹರಾಜು ಹಾಕುವುದಾಗಿ ಬೆದರಿಸಿ, ಆಕೆಯ ನಗ್ನ ಫೋಟೋಗಳನ್ನೂ ಪಡೆದುಕೊಂಡಿದ್ದ ಎಂದು ಯುವತಿ ಆರೋಪಿಸಿದ್ದಾಳೆ.
ಆರೋಪಿ ಸಮಿತ್ ರಾಜ್, “ನಾನು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ನಾಯಕ. ಶಾಸಕರು ನನ್ನ ಮಾತನ್ನು ಕೇಳುತ್ತಾರೆ. ನನ್ನ ಹಿಂದೆ ಸಂಘಟನೆ ಇದೆ. ಯಾವ ಪೊಲೀಸರೂ ಏನೂ ಮಾಡಲು ಆಗುವುದಿಲ್ಲ,” ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.ಈ ಸಂಬಂಧ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
2025ರ ಜೂನ್ನಲ್ಲಿ ಈತನ ಮೊಬೈಲ್ನಲ್ಲಿ 50ರಷ್ಟು ಅಶ್ಲೀಲ ವೀಡಿಯೊಗಳು ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿ ಜೈಲು ಸೇರಿದ್ದ ಸಮಿತ್ ಜಮೀನಿನಲ್ಲಿ ಬಿಡುಗಡೆಗೊಂಡಿದ್ದ.






