

ಕಾಪು : ಸಮಯದ ವಿಚಾರವಾಗಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ಗೋಪುರದ ಬಳಿ ಸಂಭವಿಸಿದೆ.
ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸನ್ನು ಚಾಲಕ ರೋಲ್ವಿನ್ ನೊರೋನ್ಹ ಸಮಯದ ವಿಚಾರವಾಗಿ ರಸ್ತೆಯ ಮಧ್ಯ ಭಾಗದಲ್ಲಿ ನಿಲ್ಲಿಸಿದ್ದು, ಅದರ ನಿರ್ವಾಹಕ ರಾಜೇಶ್ ಶೆಟ್ಟಿ ಹಾಗೂ ಚಾಲಕ ರೋಲ್ವಿನ್ ಮತ್ತು ಟೈಮ್ ಕೀಪರ್ ಪ್ರವೀಣ್ ಪರಸ್ಪರ ದೂಡಾಡಿಕೊಂಡು ಅವಾಚ್ಯ ಶಬ್ದದಿಂದ ಬೈದಾಡಿಕೊಂಡು ಜಗಳವಾಡುತ್ತಿದ್ದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿ ಇತರ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಿದ ಚಾಲಕ, ನಿರ್ವಾಹಕ ಹಾಗೂ ಟೈಪ್ ಕೀಪರ್ ಹಾಗೂ ಬಸ್ಸನ್ನು ವಶಕ್ಕೆ ಪಡೆದುಕೊಂಡರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.