

ಮಂಗಳೂರು: ರೌಡಿ ಶೀಟರ್ ಒಬ್ಬ ಮತ್ತೊಬ್ಬನೊಂದಿಗೆ ಸೇರಿಕೊಂಡು ಪಟಾಕಿ ಅಂಗಡಿ ಮಾಲೀಕನಿಗೆ ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿರುವ ಘಟನೆ ಬಜಪೆಯಲ್ಲಿ ವರದಿಯಾಗಿದೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫಾಝಿಲ್ ಕೊಲೆ ಪ್ರಕರಣದ ಆರೋಪಿಯಾಗಿರುವ ರೌಡಿ ಶೀಟರ್ ಪ್ರಶಾಂತ್ ಅಲಿಯಾಸ್ ಪಚ್ಚು ಮತ್ತು ಆತನ ಸಹಚರ ಅಶ್ವಿತ್ ಎಂಬುವವರ ವಿರುದ್ಧ ಈ ದೂರು ದಾಖಲಾಗಿದೆ. ಬಜಪೆಯಲ್ಲಿ ಪಟಾಕಿ ಅಂಗಡಿ ಹೊಂದಿರುವ ದಾಮೋದರ ಅವರು ಬೆದರಿಕೆಗೆ ಒಳಗಾದವರು.
ವರದಿಗಳ ಪ್ರಕಾರ, ಆರೋಪಿಗಳಿಬ್ಬರೂ ಅಕ್ಟೋಬರ್ 22ರಂದು ದಾಮೋದರ್ ಅವರ ಅಂಗಡಿಗೆ ಹೋಗಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಸುಲಿಗೆ ಮಾಡುವ ಉದ್ದೇಶದಿಂದ ಮಾಲೀಕರಿಗೆ ಜೀವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರೌಡಿ ಶೀಟರ್ನ ಬೆದರಿಕೆಗೆ ಹೆದರಿದ ಪಟಾಕಿ ಅಂಗಡಿ ಮಾಲೀಕ ದಾಮೋದರ ಅವರು ಕೂಡಲೇ ದೂರು ನೀಡಲು ಹಿಂಜರಿದ್ದರು. ಪೊಲೀಸರು ಅವರಿಗೆ ಸಮಗ್ರ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ ನಂತರವೇ ಅವರು ಧೈರ್ಯ ಮಾಡಿ ಗುರುವಾರ ಬಜಪೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಬಲೆ ದಾಮೋದರ ಅವರ ದೂರಿನನ್ವಯ ಬಜಪೆ ಪೊಲೀಸರು ಇಬ್ಬರೂ ಆರೋಪಿಗಳ ವಿರುದ್ಧ ಸುಲಿಗೆ ಯತ್ನ ಮತ್ತು ಬೆದರಿಕೆ ಹಾಕಿದ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಬಜಪೆ ಪೊಲೀಸ್ ಅಧಿಕಾರಿಗಳು ವಿಶೇಷ ತಂಡವನ್ನು ರಚಿಸಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.






