

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಲ್ಲಿ ಸಬ್ಸಿಡಿ ಸಾಲ ತೆಗೆಸಿ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮೋಸಕ್ಕೆ ಬಲಿಯಾದವರು ಉಡುಪಿ ನಗರ ಮತ್ತು ಬ್ರಹ್ಮಾವರ ಠಾಣೆಗಳಲ್ಲಿ ದೂರು ದಾಖಲಿಸಿದ್ದು , ವಂಚನೆ ಜಾಲ ಬೆನ್ನತ್ತಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚನೆ ಜಾಲದ ಕಿಂಗ್ ಪಿನ್ ಬ್ರಹ್ಮಾವರ ತಾಲ್ಲೂಕು ಆರೂರು ಗ್ರಾಮ ಕೌಸಲ್ಯಾ ಎಂಬ ಮಹಿಳೆಯನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಈ ವಂಚನೆ ಜಾಲದ ಕೊಕ್ಕರ್ಣೆ ಮತ್ತು ಬೈಂದೂರಿನ ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿಯಲ್ಲಿ ಸಬ್ಸಿಡಿ ಲೋನ್ ಕೊಡಿಸುವ ಆಸೆ ತೋರಿಸಿ ಸುಮಾರು ಒಂದೂವರೆ ಕೋಟಿ ರೂಪಾಯಿ ವಂಚಿಸಿದ್ದು ಈ ಬಗ್ಗೆ ಬ್ರಹ್ಮಾವರ ತಾಲ್ಲೂಕು ಹೆರಾಡಿ ಗ್ರಾಮದ ಸರಿತಾ ಲೂಯಿಸ್ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ರಿ ಪ್ರಕರಣದಲ್ಲಿ ಸರಿತಾ ಲೂಯಿಸ್ ಅವರಿಗೆ ಸುಮಾರು 80,72,000 ಹಾಗೂ ಅವರ ಸಂಬಂದಿ ಅಂಜಲಿನ್ ಡಿಸಿಲ್ವ ಅವರಿಗೆ 65,00,000 ವಂಚಿಸಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು.
ಸಬ್ಸಿಡಿ ಲೋನ್ ಆಸೆ ತೋರಿಸಿ ಆರೋಪಿ ಕೌಸಲ್ಯಾ, ಆಕೆಯ ಗಂಡ ಸಂದೇಶ್ ಹಾಗೂ ಪ್ರಕಾಶ, ಆಶೀಶ್ ಶೆಟ್ಟಿ, ರಾಜೇಂದ್ರ ಬೈಂದೂರ್, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್ ಹರಿಪ್ರಸಾದ್, ನಾಗರಾಜ್ ಮತ್ತು ಭಾರತಿ ಸಿಂಗ್ ಎನ್ನುವವರ ಖಾತೆಗೆ ಹಂತ ಹಂತವಾಗಿ ಹಣ ವರ್ಗಾಯಿಕೊಳ್ಳಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 218/2025 ರಂತೆ ಪ್ರಕರಣ ದಾಖಲಾಗಿದೆ.






