

ಬೆಂಗಳೂರು: ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೆಟ್ ಪ್ರದಾನ ಗರುವಾರ ರಾಜಭವನದಲ್ಲಿ ನಡೆಯಿತು. ಬೆಂಗಳೂರು ವಿ.ವಿ.ಯ ಕುಲಾಧಿಪತಿ ರಾಜ್ಯಪಾಲ ಥಾವರ್ಚಂದ್ ಗೆಹೋಟ್ ಅವರು ಸ್ಪೀಕರ್ಯು.ಟಿ. ಖಾದರ್ಅವರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಿದರು.
ರಾಜಭವನದ ಬ್ಯಾಂಕ್ವೇಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಪದವಿ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸ್ವೀಕರಿಸಿರುವುದು ಸಾಕಷ್ಟು ಹೆಮ್ಮೆ ಮತ್ತು ಸಂತಸದ ವಿಷಯವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯಿಂದ ಗೌರವದ ಜೊತೆಗೆ ಜವಾಬ್ದಾರಿ ಕೂಡ ಹೆಚ್ಚಾಗಿದೆ. ಭವಿಷ್ಯದಲ್ಲೂ ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯವನ್ನು, ವಿಶ್ವಾಸವನ್ನು ಎತ್ತಿ ಹಿಡಿಯುವ ದಾರಿಯಲ್ಲಿ ಸಾಗುತ್ತೇನೆ ಎಂದು ತಿಳಿಸಿದರು.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ವಿ.ವಿ. ಉಪಕುಲಪತಿ ಡಾ| ಜಯಕರ ಎಸ್.ಎಂ. ಕುಲಸಚಿವೆ ಕೆ.ಟಿ. ಶಾಂತಳಾ ಮತ್ತಿತರರು ಉಪಸ್ಥಿತರಿದ್ದರು.
ಬಿಎ, ಎಲ್.ಎಲ್.ಬಿ ಪದ ವೀಧರರಾಗಿರುವ ಅವರು ಉಳ್ಳಾಲದ ಮಾಜಿ ಶಾಸಕ ದಿ। ಯು.ಟಿ. ಫರೀದ್ ಅವರ ಪುತ್ರ. ಎನ್.ಎಸ್.ಯು.ಐ. ಯುವ ಕಾಂಗ್ರೆಸ್ ಹಾಗೂ ಸೇವಾದಳಗಳ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದ ಖಾದರ್ ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರವನ್ನು ಸತತ ಐದು ಬಾರಿ ಶಾಸಕರಾಗಿ ಪ್ರತಿನಿಧಿಸಿದ್ದಾರೆ.ರಾಜ್ಯ ಸರಕಾರದಲ್ಲಿ ಆರೋಗ್ಯ, ಆಹಾರ, ವಸತಿ ಹಾಗೂ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿದ್ದ ಅವರು 2023ರಿಂದ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.






