

ಟೆಂಪೊ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೇಕ್ಷಾ (22) ದುರ್ಮರಣ ಹೊಂದಿರುವ ದಾರುಣ ಘಟನೆ ಪಡುಬಿದ್ರಿ ಸಮೀಪ ನಡೆದಿದೆ.
ಅವರು ವಾಮಂಜೂರು ಕರಾವಳಿ ಕಾಲೇಜಿನ ಅಂತಿಮ ವರ್ಷದ ಡಿ ಫಾರ್ಮ್ ವಿದ್ಯಾರ್ಥಿನಿಯಾಗಿದ್ದರು.ಮೃತರು ತಾಯಿ ಮತ್ತು ಹಿರಿಯ ಸಹೋದರನನ್ನು ಅಗಲಿದ್ದಾರೆ. ನಡ್ಸಾಲು ಬಿಲ್ಲಿ ತೋಟ ನಿವಾಸಿಯಾದ ಪ್ರೇಕ್ಷಾ ವಾಮಂಜೂರು ಕರಾವಳಿ ಕಾಲೇಜಿನ ವಿದ್ಯಾರ್ಥಿನಿ.
ಕಾಲೇಜಿನ ಪರೀಕ್ಷೆ ಮುಗಿಸಿ ಮನೆಯತ್ತ ಮರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮಂಗಳೂರು ದಿಕ್ಕಿಗೆ ಸೇರುವ ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಬಸ್ಸನ್ನು ಗಮನಿಸುತ್ತಾ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ದಿಕ್ಕಿನಿಂದ ವೇಗವಾಗಿ ಬಂದ ನಂದಿನಿ ಸಾಮಾನು ಸಾಗಿಸುವ ಗೂಡ್ಸ್ ಟೆಂಪೊ ನೇರವಾಗಿ ಅಪ್ಪಳಿಸಿದೆ.
ಡಿಕ್ಕಿಯ ರಭಸಕ್ಕೆ ತಲೆಗೆ ಭಾರೀ ಗಾಯಗೊಂಡಿದ್ದ ಪ್ರೇಕ್ಷಾರಿಗೆ ಸ್ಥಳೀಯರು ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು.ತಲೆಗೆ ತೀವ್ರ ಗಾಯವಾಗಿತ್ತು.
ಮಂಗಳೂರಿನ ವೈದ್ಯರು ಎರಡು ದಿನಗಳ ಹಿಂದೆ ಮಿದುಳು ನಿಷ್ಕ್ರಿಯವಾಗಿರುವುದಾಗಿ ಘೋಷಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣಬಿಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






