January 28, 2026
WhatsApp Image 2026-01-23 at 10.46.15 AM

ಮಂಗಳೂರಿನ ಪಂಪ್ ವೆಲ್ ಮಹಾವೀರ ಸರ್ಕಲ್ ಬಳಿ 9 ವರ್ಷಗಳ ಹಿಂದೆ ತೆಗೆದು ಹಾಕಲಾಗಿದ್ದ ಐಕಾನಿಕ್ ಹೊನ್ನ ಬಣ್ಣದ ಕಲಶ ಮತ್ತೆ ಸ್ಥಾಪಿಸಲಾಗುತ್ತಿದೆ. 

ಮಂಗಳೂರಿನ ಹೆಬ್ಬಾಗಿಲು ಎನಿಸಿದ ಪಂಪ್‌ವೆಲ್‌ನ ಮಹಾವೀರ ವೃತ್ತದಲ್ಲಿ 2016 ರಲ್ಲಿ ಮೇಲ್ಸೇತುವೆ ನಿರ್ಮಾಣದ ವೇಳೆ ತೆರವುಗೊಳಿಸಿದ್ದ ಬೃಹತ್ ಕಲಶವನ್ನು ಒಂಭತ್ತು ವರ್ಷ ಬಳಿಕ ಪುನರ್ ಸ್ಥಾಪಿಸಲಾಗಿದೆ. ಕಲಶವನ್ನು ಪಂಪ್‌ವೆಲ್‌ನಿOದ ಪಡೀಲ್‌ಗೆ ಹೋಗುವ ರಸ್ತೆಯಲ್ಲಿರುವ ವೃತ್ತದಲ್ಲಿ ಇರಿಸಲಾಗಿದೆ. ಮೊದಲು ಅಲ್ಲೇ ಪೊಲೀಸ್ ಔಟ್‌ಪೋಸ್ಟ್ ಬಳಿ ಕಲಶ ಇರಿಸಲಾಗಿತ್ತು. ಈಗ ಅಲ್ಲಿಂದ ತೆಗೆದು ಸೋಮವಾರ ರಾತ್ರಿ 8.30 ಕ್ಕೆ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಿ ಮಂಗಳವಾರ ನಸುಕಿನ ಜಾವ 4.30 ರ ಹೊತ್ತಿಗೆ ಪೂರ್ಣಗೊಂಡಿತು. ಪೊಲೀಸ್ ಇಲಾಖೆ, ಮೆಸ್ಕಾಂ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ಸಹಕಾರದೊಂದಿಗೆ ಕಲಶವನ್ನು ಯಶಸ್ವಿಯಾಗಿ ಮರು ಸ್ಥಾಪಿಸಲಾಯಿತು.

ಮಂಗಳೂರು ಜೈನ್ ಸೊಸೈಟಿಯ ಅಧ್ಯಕ್ಷ ಪುಷ್ಪರಾಜ್ ಜೈನ್, ಕಾರ್ಯದರ್ಶಿ ಸಚಿನ್ ಕುಮಾರ್, ಖಜಾಂಚಿ ವಿಜೇಶ್ ಬಲ್ಲಾಳ್, ಪಾಲಿಕೆ ಮಾಜಿ ಸದಸ್ಯ ಸಂದೀಪ್ ಗರೋಡಿ, ವಿವಿಧ ಸಂಘಗಳ 40 ಕ್ಕೂ ಹೆಚ್ಚು ಸದಸ್ಯರು ಬೆಂಬಲ ನೀಡಿದರು. ಸುಮಾರು 30 ಅಡಿ ಎತ್ತರ ಮತ್ತು 22 ಟನ್ ತೂಕದ ಕಲಶವನ್ನು ಸರ್ವಿಸ್ ರಸ್ತೆಯ ಮೂಲಕ ಪಂಪ್‌ವೆಲ್ ಪಡೀಲ್ ರಸ್ತೆಗೆ ತರಲಾಯಿತು. ಮೂರು ಕ್ರೇನ್‌ಗಳು, ಒಂದು ಜೆಸಿಬಿ ಮತ್ತು ಒಂದು ಟ್ರೇಲರ್ ಬಳಸಿ ಇಡೀ ಕಾರ್ಯಾಚರಣೆ ಎಂಟು ಗಂಟೆಗಳ ಕಾಲ ನಡೆಯಿತು.  ಈ ಕಲಶವನ್ನು ಮೂಲತಃ 2006 ರಲ್ಲಿ ಮಹಾವೀರ್ ವೃತ್ತದಲ್ಲಿ 43 ಸೆಂಟ್ಸ್ ಭೂಮಿಯಲ್ಲಿ ಸ್ಥಾಪಿಸಲಾಗಿತ್ತು. ಫ್ಲೈಓವರ್ ನಿರ್ಮಾಣದ ಕಾರಣದಿಂದಾಗಿ ಮಾರ್ಚ್ 2016 ರಲ್ಲಿ ಅದನ್ನು ತೆಗೆದು ಹಾಕಿ ಪಂಪ್‌ವೆಲ್ ಪೊಲೀಸ್ ಹೊರಠಾಣೆ ಬಳಿ ತಾತ್ಕಾಲಿಕವಾಗಿ ಇರಿಸಲಾಗಿತ್ತು. ಸರಿಯಾದ ನಿರ್ವಹಣೆ ಇಲ್ಲದೆ ಕಲಶ ಒಂಬತ್ತು ವರ್ಷಗಳಿಂದ ನಿರ್ಲಕ್ಷ್ಯ ಸ್ಥಿತಿಯಲ್ಲಿತ್ತು. ಜೈನ ಸಮಾಜ ಮತ್ತು ಸಮುದಾಯದ ಮುಖಂಡರು ಇದನ್ನು ಸ್ಥಳಾಂತರಿಸುವOತೆ ನಿರಂತರವಾಗಿ ಒತ್ತಾಯಿಸುತ್ತಿದ್ದರು. ಕೆಲವು ತಿಂಗಳ ಹಿಂದೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗಮವು ಪ್ರಸ್ತಾವನೆಯನ್ನು ಅನುಮೋದಿಸಿತು ಮತ್ತು ಅದರ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮರುಸ್ಥಾಪನೆಯನ್ನು ಕೈಗೊಳ್ಳಲಾಗಿದೆ.

About The Author

Leave a Reply