

ಮಂಜೇಶ್ವರ: ಕುಂಜತ್ತೂರಿನ ತೂಮಿನಾಡಿನಲ್ಲಿ ಬಾಲಕಿಯ ಹತ್ಯೆಯ ಬೆನ್ನಲ್ಲೇ, ಘಟನೆ ವೇಳೆ ಗಾಯಗೊಂಡಿದ್ದ ಬಾಲಕಿಯ ದೊಡ್ಡಪ್ಪನೂ ಚಿಕಿತ್ಸೆ ಫಲಿಸದೇ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಕುಂಜತ್ತೂರು ತೂಮಿನಾಡಿನಲ್ಲಿ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಉಮರ್ ಪಾಷ ಎಂಬಾತ ನಡೆಸಿದ ಬರ್ಬರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯ ಶೇಕುಂಞಿ ಅವರು ಮಂಗಳವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸೋಮವಾರ ಸಂಜೆ ನಡೆದ ಘಟನೆಯಲ್ಲಿ ಉಮರ್ ಪಾಷ ತನ್ನ 18 ವರ್ಷದ ಮಗಳು ಮರಿಯಮತ್ ಜುಮೈರಾಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿದ್ದ. ಈ ವೇಳೆ ಮಗಳ ಕಿರುಚಾಟ ಕೇಳಿ ಆಕೆಯನ್ನು ರಕ್ಷಿಸಲು ಧಾವಿಸಿದ್ದ ದೊಡ್ಡಪ್ಪ ಶೇಕುಂಞಿ ಅವರಿಗೂ ಆರೋಪಿ ಚಾಕುವಿನಿಂದ ಇರಿದಿದ್ದ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಶೇಕುಂಞಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕಳೆದ ಮೂರು ತಿಂಗಳ ಹಿಂದಷ್ಟೇ ವಿದೇಶದಿಂದ ಊರಿಗೆ ಮರಳಿದ್ದ ಉಮರ್ ಪಾಷಾ, ಆಸ್ತಿ ವಿಚಾರವಾಗಿ ಕುಟುಂಬದವರೊಂದಿಗೆ ಪದೇ ಪದೇ ಜಗಳವಾಡುತ್ತಿದ್ದ ಎನ್ನಲಾಗಿದೆ. ಸೋಮವಾರ ಸಂಜೆ ಈ ಜಗಳ ತಾರಕಕ್ಕೇರಿತ್ತು.






