

ಬೆಳ್ತಂಗಡಿ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕಾಲೇಜು ಹೋಗುವ ವೇಳೆ ಅಪರಿಚಿತ ಗೂಂಡಾಗಳು ಅಪಹರಿಸಲು ಯತ್ನಿಸಿ, ಚಾಕುವಿನಿಂದ ಇರಿದ ಘಟನೆ ಅತ್ಯಂತ ಬೆಚ್ಚಿಬೀಳಿಸುವಂತದ್ದು. ಇದು ಹೆಣ್ಣು ಮಕ್ಕಳ ಸುರಕ್ಷತೆಯ ಮೇಲೆ ದೊಡ್ಡ ಸವಾಲು ಎತ್ತಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷೆ ಶಿನೀರ ಖಂಡಿಸಿದರು.

ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಎಪ್ಸ್ಟೀನ್ ಫೈಲ್ಸ್ ಮತ್ತು ನ್ಯಾಯ ಸಿಗದೇ ಉಳಿದಿರುವ ಸ್ಥಳೀಯ ಮಟ್ಟದಲ್ಲಿ ನಡೆದ ಬೆಳ್ತಂಗಡಿ ಸೌಜನ್ಯ ಪ್ರಕರಣ ಇರುವಾಗಲೇ ಹೆಣ್ಣು ಮಕ್ಕಳ ಮೇಲಿನ ಅಪಹರಣ, ದುರ್ವ್ಯವಹಾರ ಮತ್ತು ದೌರ್ಜನ್ಯಗಳ ಭೀತಿ ಇನ್ನೂ ಮುಗಿದಿಲ್ಲ ಎಂಬುದು ಈ ಘಟನೆ ಸ್ಪಷ್ಟಪಡಿಸಿದೆ ಎಂದು ಹೇಳಿದರು.
ಹಾಡುಹಗಲೇ ನಡೆದಿರುವ ಈ ಅಪಹರಣ ಯತ್ನ ಬೆಳ್ತಂಗಡಿ ಜನತೆಯಲ್ಲಿ ಗಂಭೀರ ಆತಂಕವನ್ನು ಉಂಟುಮಾಡಿದೆ. ಹೆಣ್ಣು ಮಕ್ಕಳನ್ನು ನಿರಂತರವಾಗಿ ಅಭದ್ರತೆಯ ವಾತಾವರಣಕ್ಕೆ ತಳ್ಳುವಂತಹ ಘಟನೆಗಳನ್ನು ಸಮಾಜ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪೋಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಅಪರಾಧಿಗಳನ್ನು ಪತ್ತೆ ಮಾಡಿ, ಅವರನ್ನು ಕಾನೂನಿನ ಮುಂದೆ ನಿಲ್ಲಿಸಿ, ಈ ಕ್ರತ್ಯದ ಹಿಂದೆ ಇರುವ ಕಾಣದ ಕೈಗಳನ್ನು ಯಾವುದೇ ಒತ್ತಡಗಳಿಗೆ ಮಣಿಯದೆ ಹೊರತೆಗೆದು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕಠಿಣ ನಿಗಾ ಮತ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಹಿಳೆಯರ ಸುರಕ್ಷತೆ ರಾಜ್ಯದ ಜವಾಬ್ದಾರಿಯಷ್ಟೇ ಅಲ್ಲ, ಸಮಾಜದ ಒಟ್ಟಾರೆ ಬದ್ಧತೆಯ ಪರೀಕ್ಷೆ ಎಂದು ಅವರು ಗಂಭೀರವಾಗಿ ಸೂಚಿಸಿದರು.





