February 21, 2026
WhatsApp Image 2026-02-21 at 5.21.06 PM

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಶ್ರೀಧರ್‌ ಎನ್ನುವವರ ಅನುಮಾನಾಸ್ಪದ ಸಾವು ಹಾಗೂ ನೂರಾರು ಮಹಿಳಾ ಶವಗಳನ್ನು ಹೂತಿಡಲಾಗಿದೆ ಎನ್ನುವ ಗಂಭೀರ ಆರೋಪಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೈಕೋರ್ಟ್‌ ನಿರ್ದೇಶದನ ಬೆನ್ನಲ್ಲೇ ಈ ಪ್ರಕರಣದ ಮರುತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ 91/2022 ರ ತನಿಖೆಯು ‘ಅತ್ಯಂತ ಕಳಪೆ’ (Absolutely Shoddy) ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಕರಣದ ಸಾಕ್ಷ್ಯ ನಾಶಪಡಿಸಿರುವ ಸಾಧ್ಯತೆ ಮತ್ತು ತನಿಖಾಧಿಕಾರಿಗಳು ಹಾದಿ ತಪ್ಪಿಸಿರುವ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು, ಸತ್ಯಾಸತ್ಯತೆ ಹೊರಬರಲು ಮರುತನಿಖೆಯ ಅಗತ್ಯವಿದೆ ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯು ಫೆಬ್ರವರಿ 20, 2026 ರಂದು ಅಧಿಕೃತವಾಗಿ SIT ರಚನೆಗೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ : ಧರ್ಮಸ್ಥಳದ ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಫಾರ್ಮ್‌ಹೌಸ್‌ ಒಂದರಲ್ಲಿ 2022 ರಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ್‌ ಎನ್ನುವವರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಕೊಲೆ ಎಂದು ದಾಖಲು ಮಾಡಿದ್ದರೂ, ನಂತರದ ತನಿಖೆಯಲ್ಲಿ ಪೊಲೀಸರು ಇದನ್ನು ವಿಷ ಸೇವನೆ ಅಥವಾ ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನ ಪಟ್ಟರು ಎನ್ನುವ ಆರೋಪ ಕೇಳಿ ಬಂದಿತ್ತು.

ಮೃತದೇಹದ ಮೇಲೆ ಬಲವಾದ ಏಟುಗಳಿದ್ದರೂ ಪೋಸ್ಟ್‌ಮಾರ್ಟಂನಲ್ಲಿ ವಿಷದ ಅಂಶವಿದೆ ಎಂದು ಬರೆಯಲಾಗಿತ್ತು. ಈ ಕುರಿತು ಮೃತರ ಸಂಬಂಧಿ ಹರೀಶ್‌ ಮುಗೇರ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ತನಿಖಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದರು.

ಹಳೆಯ ವರದಿಯ ನ್ಯೂನತೆಗಳು, ಸಿಸಿಟಿವಿ ದೃಶ್ಯಾವಳಿಗಳ ನಾಪತ್ತೆ, ಸಿಡಿಆರ್‌ ವರದಿಗಳ ಕುರಿತು ವಿಶ್ಲೇಷಣೆಯನ್ನು ಹೈಕೋರ್ಟ್‌ ಆದೇಶದ ಪ್ರಕಾರ, ಎಸ್‌ಐಟಿ ತಂಡವು ಮುಂದಿನ ನಾಲ್ಕು ತಿಂಗಳ ಒಳಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ನೀಡಬೇಕಿದೆ.

ಶ್ರೀ ಲಭೂ ರಾಮ್, ಐಪಿಎಸ್ (ಐಜಿಪಿ, ಕೇಂದ್ರ ವಲಯ, ಬೆಂಗಳೂರು): ಇವರು ಈ ತನಿಖಾ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶ್ರೀ ಹರಿರಾಮ್ ಶಂಕರ್, ಐಪಿಎಸ್ (ಎಸ್.ಪಿ, ಉಡುಪಿ ಜಿಲ್ಲೆ): ಇವರು ತಂಡದ ಪ್ರಮುಖ ಸದಸ್ಯರಾಗಿ ತಂಡಕ್ಕೆ ಶಕ್ತಿ ನೀಡಲಿದ್ದಾರೆ. ಶ್ರೀ ಎಂ.ಆರ್. ಹರೀಶ್ (ಡಿವೈಎಸ್‌ಪಿ, ಬೆಂಗಳೂರು ಗ್ರಾಮಾಂತರ): ಇವರು ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

About The Author

Leave a Reply