

ಬಂಟ್ವಾಳ : ಎರಡು ದಿನಗಳ ಹಿಂದೆ ಫರಂಗಿಪೇಟೆ ಸಮೀಪ ನೇತ್ರಾವತಿ ನದಿ ದಡದಲ್ಲಿ ಆಧಾರ್ ಕಾರ್ಡ್ ರಾಶಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಫರಂಗಿಪೇಟೆ ಅಂಚೆ ಇಲಾಖೆ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿ ದಡದಲ್ಲಿ ಮಾ.3ರಂದು ಸಮಯ ಸಂಜೆ ಸ್ಥಳೀಯ ನಿವಾಸಿಗಳ 2013ರಿಂದ 2023ರವರೇಗಿನ ಅಂದಾಜು 500 ಮೂಲ ಆಧಾರ್ ಕಾರ್ಡ್ಗಳು ಪತ್ತೆಯಾಗಿದ್ದವು. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆಯ ಪೋಸ್ಟ್ ಆಫೀಸಿನ ಸೀಲ್ ಪತ್ತೆಯಾಗಿದ್ದು, ಮೂಲ ಆಧಾರ್ ಕಾರ್ಡ್ ಪ್ರತಿಗಳು ಸಾರ್ವಜನಿಕರ ಮನೆಗೆ ತಲುಪದೆ, ನೇತ್ರಾವತಿ ನದಿ ಹೇಗೆ ಬಂತು ಎಂಬ ಪ್ರಶ್ನೆ ಎದುರಾಗಿದೆ.

ಆಧಾರ್ ಕಾರ್ಡ್ಗಳು ಪ್ರಸ್ತುತ ಗ್ರಾಮ ಪಂಚಾಯತ್ ಸ್ವಾಧೀನದಲ್ಲಿದೆ. ಸಂಬಂಧಪಟ್ಟ ಅಂಚೆ ಇಲಾಖೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಪತ್ರ ಬರೆಯುವಂತೆ ಪಾಣೆಮಂಗಳೂರು ಕಂದಾಯ ನಿರೀಕ್ಷಕರು ತಹಸೀಲ್ದಾರ್ಗೆ ವರದಿ ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಧಾರ್ ಕಾರ್ಡ್ಗಳಲ್ಲಿ ಫರಂಗಿಪೇಟೆಯ ಪೋಸ್ಟ್ ಆಫೀಸಿನ ಸೀಲ್ ಪತ್ತೆಯಾಗಿದೆ. ಆಧಾರ್ ಕಾರ್ಡ್ಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಅಂಚೆ ಇಲಾಖೆಯವರದ್ದಾಗಿರುತ್ತದೆ. ಅಂಚೆ ಇಲಾಖೆಯ ಸಿಬ್ಬಂದಿ ಸಾರ್ವಜನಿಕ ಸೇವಕರಾಗಿದ್ದು, ಈ ದಾಖಲೆಗಳನ್ನು ಸುರಕ್ಷಿತವಾಗಿ ಸಾರ್ವಜನಿಕರಿಗೆ ವಿತರಿಸುವ ಕಾನೂನಾತ್ಮಾಕ ಜವಾಬ್ದಾರಿಯನ್ನು ಹೊಂದಿದ್ದರೂ ಮತ್ತು ವೈಯಕ್ತಿಕ ಮಾಹಿತಿ ಸೋರಿಕೆ ಆಗುವ ಸಂಭವ ಇದ್ದರೂ ಈ ದಾಖಲೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬೇಜಾವ್ದಾರಿಯಿಂದ ಬಿಸಾಡಿರುವುದು ಮೇಲ್ನೋಟಕ್ಕೆ ನಂಬಿಕೆದ್ರೋಹ ಎಸಗಿದಂತಾಗಿದೆ. ನಾಗರಿಕರ ಆಧಾರ್ ಕಾರ್ಡ್ನ್ನು ಸುರಕ್ಷಿತವಾಗಿ ನಾಗರಿಕರಿಗೆ ತಲುಪಿಸುವ ಜವಾಬ್ದಾರಿ ಹೊಂದಿದ ಅಂಚೆ ಇಲಾಖೆಯ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.






