

ಪುತ್ತೂರು: ತಲವಾರು ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಘಟನೆಗೆ ಸಂಬಂಧಿಸಿ ಆರೋಪಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಮುಕ್ವೆ ಪ್ರದೇಶದಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಪುತ್ತೂರು ನರಿಮೊಗರು ನಿವಾಸಿ ಮಹಮ್ಮದ್ ಸಿರಾಜುದ್ದೀನ್ (36) ಅವರು ಮಾರ್ಚ್ 6ರಂದು ರಾತ್ರಿ ಮುಕ್ವೆ ಮಸೀದಿ ಬಳಿ ಇದ್ದ ವೇಳೆ, ಅದೇ ಊರಿನ ಅಬ್ದುಲ್ ರಹಿಮಾನ್ ಎಂಬಾತನು ಸಂಜೆ ನಡೆದಿದ್ದ ಗಲಾಟೆ ವಿಚಾರವಾಗಿ ತಕರಾರು ತೆಗೆದುಕೊಂಡು ಅಲ್ಲಿಂದ ತೆರಳಿದ್ದಾನೆ.

ಬಳಿಕ ಸಿರಾಜುದ್ದೀನ್ ಅವರು ಮನೆಗೆ ತೆರಳುವ ವೇಳೆ ಮುಕ್ವೆ ಪ್ರದೇಶದಲ್ಲಿ ತಲುಪಿದಾಗ, ಅಬ್ದುಲ್ ರಹಿಮಾನ್ ಕೈಯಲ್ಲಿ ತಲವಾರು ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ಪ್ರದರ್ಶಿಸುತ್ತಿರುವುದನ್ನು ಕಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
.ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 29/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 109, 351 ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 3, 25, 27ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇನ್ನೊಂದೆಡೆ, ಘಟನಾ ಸ್ಥಳದಲ್ಲಿದ್ದ ಕೆಲ ಸ್ಥಳೀಯರು ಅಬ್ದುಲ್ ರಹಿಮಾನ್ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಬಗ್ಗೆ ಅಬ್ದುಲ್ ರಹಿಮಾನ್ ನೀಡಿದ ಪ್ರತಿದೂರಿನ ಮೇರೆಗೆ, ತಾನು ಮುಕ್ವೆ ಜಂಕ್ಷನ್ ಬಳಿ ನಿಂತಿದ್ದಾಗ ಹಿಂದಿನಿಂದ ಅಪರಿಚಿತರು ಹಲ್ಲೆ ನಡೆಸಿ ಪ್ರಜ್ಞೆ ತಪ್ಪುವಂತೆ ಮಾಡಿರುವುದಾಗಿ ಹೇಳಿದ್ದಾನೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 30/2026ರಂತೆ BNS 2023ರ ಕಲಂ 118(1), 126(2) ಜೊತೆಗೆ 3(5)ರಡಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಎರಡೂ ಪ್ರಕರಣಗಳ ತನಿಖೆ ಮುಂದುವರಿದಿದೆ.






