Visitors have accessed this post 520 times.
ಮಂಗಳೂರು: ನಗರದ ಕಾವೂರು ಠಾಣಾ ವ್ಯಾಪ್ತಿಯ ‘ದಿಯಾ ಸಿಸ್ಟಮ್ಸ್’ ಸಾಫ್ಟ್ವೇರ್ ಕಂಪನಿಯ ಚಾಲಕರ ನಡುವೆ ಬುಧವಾರ ರಾತ್ರಿ ಜಗಳ ನಡೆದಿದ್ದು, ಒಬ್ಬ ಚಾಲಕನಿಗೆ ನಾಲ್ವರ ಗುಂಪು ಗಂಭೀರವಾಗಿ ಹಲ್ಲೆ ನಡೆಸಿದೆ.
ಸಂದೀಪ್ ಹಲ್ಲೆಗೊಳಗಾದ ಚಾಲಕ. ಅದೇ ಕಂಪನಿಯ ಇನ್ನೊಬ್ಬ ಕಾರು ಚಾಲಕ ತೇಜಸ್ ಶೆಟ್ಟಿ, ಆತನ ಸೋದರ ಭವಿತ್ ಶೆಟ್ಟಿ, ಗೆಳೆಯರಾದ ಪ್ರೀತಮ್ ಹಾಗೂ ಪುನೀತ್ ದೇವಾಡಿಗ ಹಲ್ಲೆ ನಡೆಸಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತೇಜಸ್ ಶೆಟ್ಟಿ ಸಂದೀಪ್ ವಿರುದ್ಧ ಹಳೆ ವೈಷನ್ಯ ಹೊಂದಿದ್ದ. ಬುಧವಾರ ರಾತ್ರಿ ತನ್ನ ಪಾಳಿಯ ಕೆಲಸ ಮುಗಿದ ಬಳಿಕ ಆತ ಸೋದರ ಭವಿತ್ ಶೆಟ್ಟಿ, ಗೆಳೆಯರಾದ ಪ್ರೀತಮ್, ಪುನೀತ್ ದೇವಾಡಿಗ ಜೊತೆ ಸೇರಿ, ಕೆಲಸ ಮುಗಿಸಿ ತೆರಳುತ್ತಿದ್ದ ಸಂದೀಪ್ ಜೊತೆ ಜಗಳವಾಡಿದ್ದ. ನಾಲ್ವರು ಸೇರಿ ಮಾರಕ ಆಯುಧದಿಂದ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದು. ತಲೆ ಮತ್ತಿತರ ಭಾಗಗಳಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುವನ್ನು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಗಳಕ್ಕೆ ಕಾರಣಗಳೇನು ಎಂಬುದು ಇನ್ನೂ ತಿಳಿದಿಲ್ಲ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣವು ಕಾವೂರು ಠಾಣೆಯಲ್ಲಿ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.