
ಮೈಸೂರಿನ ಉದಯಗಿರಿಯಲ್ಲಿ ನಡೆದ ಕೋಮು ಘರ್ಷಣೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕಾರ್ಯಕರ್ತರು ಪ್ರಚೋದನೆ ನೀಡಿದ್ದಾರೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.



ಮಂಗಳವಾರ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಕ್ಷ್ಮಣ್ ಅವರು, ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು, ವಿಶೇಷವಾಗಿ ಸತೀಶ್ ಅಲಿಯಾಸ್ ಪಾಂಡುರಂಗ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದ್ದಾರೆಂದು ಆರೋಪಿಸಿದರು.
ಮಾಜಿ ಸಂಸದ ಪ್ರತಾಪಸಿಂಹ ಯಾರಿಗೆ ತೊಂದರೆ ಆಗಿರುವುದಕ್ಕೆ ಉದಯಗಿರಿಗೆ ಭೇಟಿ ನೀಡಿದರು. ಸತೀಶ್ ಯಾರು? ಆತನ ಹಿಂದಿರುವವರು ಯಾರು? ನಮಗಿರುವ ಮಾಹಿತಿಯ ಪ್ರಕಾರ ಸತೀಶ್ ಎಂಬ ವ್ಯಕ್ತಿ ಪ್ರತಾಪ್ ಸಿಂಹ ಅವರ ಬಲಗೈ ಬಂಟ ಎಂದು ತಿಳಿದು ಬಂದಿದೆ. ಇವೆಲ್ಲ ವಿಚಾರವನ್ನು ಪತ್ತೆ ಮಾಡಲು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಕ್ಯಾತಮಾರನಹಳ್ಳಿಗೆ ಬಂದು ಪ್ರಚೋದನಕಾರಿಯಾಗಿ ಮಾತಾಡಿರುವ ಪ್ರತಾಪ ಸಿಂಹ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.
300ಕ್ಕೂ ಹೆಚ್ಚು ಆರೆಸ್ಸೆಸ್ ಕಾರ್ಯಕರ್ತರು ಮೈಸೂರಿಗೆ ಬಂದಿದ್ದಾರೆ. ಅವರಲ್ಲಿ 50 ಕಾರ್ಯಕರ್ತರು ಉದಯಗಿರಿಗೆ ಬಂದಿದ್ದಾರೆ. ವೇಷ ಮರೆಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಆರ್ಎಸ್ಎಸ್ ಕಾರ್ಯಕರ್ತರು ಟೋಪಿ ಹಾಕಿಕೊಂಡು ಬಂದು ಗಲಾಟೆ ಮಾಡಿದ್ದಾರೆ. ಇವರ ವಿರುದ್ಧ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ವಿರುದ್ಧ ಪೋಸ್ಟ್ ಮಾಡಿದ್ದರೆ ಬಿಜೆಪಿಯವರು ಸುಮ್ಮನಿರುತ್ತಿದ್ದರೆ? ಮುಸ್ಲಿಂ ಧರ್ಮ ಗುರುಗಳ ಅವಹೇಳನಾಕಾರಿ ಪೊಸ್ಟರ್ ಹಾಕಿರುವುದು ತಪ್ಪಲ್ಲವೇ? ಮುಸ್ಲಿಮರು ಈ ದೇಶದ ಮಕ್ಕಳು ಅಲ್ಲವೇ? ಅವರೇನು ಹೊರದೇಶದಿಂದ ಬಂದವರೇ? ಎಂದು ಪ್ರಶ್ನಿಸಿದರು.