
ಮಂಗಳೂರು: “ರಾಜ್ಯ ಕಾಂಗ್ರೆಸ್ ಸರಕಾರವು ಕರಾವಳಿಯಲ್ಲಿ ಕೋಮುವಾದಿಗಳನ್ನು ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ. ಈ ಕಾರಣಕ್ಕೆ ಬೇಸತ್ತು ಉಳ್ಳಾಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಮಹಮ್ಮದ್ ಶಮೀರ್ ತಿಳಿಸಿದ್ದಾರೆ.

ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ರಾಜ್ಯ ಕಾಂಗ್ರೆಸ್ ಸರಕಾರವು ಕರಾವಳಿಯಲ್ಲಿ ಕೋಮುವಾದಿಗಳ ಹೆಡೆಮುರಿ ಕಟ್ಟಿಹಾಕಲು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಇದೇ ಕಾರಣಕ್ಕೆ ಬಂಟ್ವಾಳದ ಕೊಳತ್ತಮಜಲಿನಲ್ಲಿ ನಡೆದ ಅಮಾಯಕ ಯುವಕ ಅಬ್ದುಲ್ ರಹ್ಮಾನ್ ರ ಕೊಲೆಯಂತಹ ದುಷ್ಕೃತ್ಯಗಳು ಇಲ್ಲಿ ಮರುಕಳಿಸುತ್ತಿವೆ. ಕಾಂಗ್ರೆಸ್ ಸರಕಾರದ ಬೇಜವಾಬ್ದಾರಿತನ ಮತ್ತು ನಿಷ್ಕ್ರಿಯತೆಯಿಂದಾಗಿ ಇವು ಸಂಭವಿಸುತ್ತಿವೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ನಿಷ್ಕ್ರಿಯ ಆಡಳಿತವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಇದರಿಂದ ಸಂಘ ಪರಿವಾರದ ಸಂಘಟನೆಗಳ ಗೂಂಡಾಗಳಿಗೆ ಮುಕ್ತ ಚಲನೆಯ ಸ್ವಾತಂತ್ರ್ಯ ದೊರೆತಂತಾಗಿದೆ, ಇದು ಸರಕಾರದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಜೊತೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನಿರ್ಲಕ್ಷ್ಯದ ಧೋರಣೆಯೂ ಜನರಲ್ಲಿ ಅಸಮಾಧಾನ ಉಂಟು ಮಾಡಿದೆ. ಪೊಲೀಸ್ ಇಲಾಖೆಯು ಸರಕಾರದ ಹಿಡಿತದಲ್ಲಿಲ್ಲದಿರುವುದು ಗಂಭೀರ ಕಳವಳದ ವಿಷಯವಾಗಿದೆ ಎಂದು ಮುಹಮ್ಮದ್ ಶಮೀರ್ ಹೇಳಿದ್ದಾರೆ.

ಶರಣ್ ಪಂಪೈಲ್ ಮತ್ತು ಶ್ರೀಕಾಂತ್ ಶೆಟ್ಟಿಯಂಥವರು ಗಲಭೆಗೆ ಪ್ರಚೋದನೆ ನೀಡುತ್ತಿದ್ದರೂ, ಅವರು ಸ್ವಚ್ಚಂದವಾಗಿ ತಿರುಗಾಡುತ್ತಿದ್ದಾರೆ. ಶರಣ್ ಪಂಪೈಲ್ ನಂಥವರ ಮೇಲೆ ಪ್ರಕರಣ ದಾಖಲಾದರೂ, ಎರಡೇ ನಿಮಿಷಗಳಲ್ಲಿ ಜಾಮೀನು ದೊರೆಯುವಂತಹ ವ್ಯವಸ್ಥೆಯಿಂದ ಸಾಮಾನ್ಯ ಜನರಲ್ಲಿ ನ್ಯಾಯದ ಮೇಲಿನ ನಂಬಿಕೆ ಕಡಿಮೆಯಾಗಿದೆ. ಇದು ಸರಕಾರದ ಕಾನೂನು ಜಾರಿ ವ್ಯವಸ್ಥೆಯ ದೌರ್ಬಲ್ಯವನ್ನು ಬಯಲಿಗೆಳೆಯುತ್ತದೆ ಎಂದವರು ಆರೋಪಿಸಿದರು.
ಈ ಎಲ್ಲಾ ಕಾರಣಗಳಿಂದಾಗಿ ಪ್ರಸಕ್ತ ಕಾಂಗ್ರೆಸ್ ಸರಕಾರದ ಆಡಳಿತದ ನೀತಿಗಳೊಂದಿಗೆ ಒಪ್ಪಿಕೊಳ್ಳಲು ತನಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಮುಹಮ್ಮದ್ ಶಮೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.