ಬಂಟ್ವಾಳ : ಕೊಲೆಗೀಡಾದ ರಹೀಂ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬಂಟ್ವಾಳ ತಾ.ನ ಇರಾಕೋಡಿಯಲ್ಲಿ ಹತ್ಯೆಯಾದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹಾಗೆಯೇ ಘಟನೆಯ ವೇಳೆ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಲಂದರ್ ಶಾಫಿ ಅವರನ್ನು ಭೇಟಿಯಾಗಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಚಿವರ ಭೇಟಿಯ ವೇಳೆ ವಿ.ಪ.ಸದಸ್ಯ ಐವಾನ್ ಡಿಸೋಜ,ಮಾಜಿ ಸಚಿವ ಬಿ.ರಮಾನಾಥ ರೈ,ಗೇರು ನಿಗಮದ ಅಧ್ಯಕ್ಷೆ ಮಮತಾಗಟ್ಟಿ,ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್ .ಪೂಜಾರಿ, ಜಿ.ಎ.ಬಾವ, ಇನಾಯತ್ ಆಲಿ, ಚಂದ್ರಶೇಖರ ಭಂಡಾರಿ, ಇಬ್ರಾಹಿಂ ನವಾಜ್ ಹಾಗೂ ಪಕ್ಷದ ಸ್ಥಳೀಯ ಪ್ರಮುಖರಿದ್ದರು.

ಅಬ್ದುಲ್ ರಹಿಮಾನ್ ಕೊಲೆ ಹಾಗೂ ಜೊತೆಗಿದ್ದ ಕಲಂದರ್ ಶಾಫಿ ಎಂಬವರ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಅಧಿಕೃತವಾಗಿ ಬಂಧಿಸಿದ್ದಾರೆ.
ಬಂಟ್ವಾಳ ತಾ.ನ ಕಾರಿಂಜಕ್ರಾಸ್ ಬಳಿ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ತೆಂಕಬೆಳ್ಳೂರು ಗ್ರಾಮದ ನಿವಾಸಿ ಸುಮಿತ್ ಆಚಾರ್ಯ (27) ಹಾಗೂ ಬಡಗಬೆಳ್ಳೂರು ಗ್ರಾಮದ ನಿವಾಸಿ ರವಿರಾಜ್ (23) ಎಂಬವರನ್ನು ಶುಕ್ರವಾರ ಬಂಧಿಸಿದ್ದಾರೆ.

ಇದರೊಂದಿಗೆ ಈ ಕೃತ್ಯಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 5 ಕ್ಕೇರಿದೆ. ಈ ಇಬ್ಬರು ಆರೋಪಿಗಳನ್ನು ಶನಿವಾರ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರ ನಿವೇದನೆಯಂತೆ ಹೆಚ್ಚಿನ ವಿಚಾರಣೆಗಾಗಿ ಜೂ.9 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕುರಿಯಾಳ ಗ್ರಾಮದ ಮುಂಡರಕೋಡಿ ನಿವಾಸಿ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರ ನಿವಾಸಿಗಳಾದ ಪ್ರಥ್ವಿರಾಜ್ (21) ಹಾಗೂ ಚಿಂತನ್ (19) ಎಂಬವರನ್ನು ಈ ಮೊದಲೇ ಬಂಧಿಸಲಾಗಿದ್ದು,ಇವರನ್ನು ಕೂಡ ನ್ಯಾಯಾಲಯ ಜೂ. 9 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಡಿ ವೈಎಸ್ಪಿ ವಿಜಯಪ್ರಸಾದ್ ತನಿಖೆ ಮುಂದುವರಿಸಿದ್ದಾರೆ.

Leave a Reply