ಬಿಜೆಪಿಯ ಸುಳ್ಳು ಆರೋಪಗಳಿಗೆ ದಾಖಲೆ ಸಮೇತ ಪ್ರತಿಕ್ರಿಯೆ – ದ.ಕ. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಜನಜಾಗೃತಿ ಅಭಿಯಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಬಿಜೆಪಿ ಮುಖಂಡರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪಗಳ ಮೂಲಕ ಜನತೆಗೆ ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಪೈಕಿ ಹಲವು ಆರೋಪಗಳು ನಿಖರ ಮಾಹಿತಿಯಿಲ್ಲದ ನಿರಾಧಾರ ದೋಷಾರೋಪಣೆಯ ರೂಪದಲ್ಲಿವೆ.
ಈ ಹಿನ್ನಲೆಯಲ್ಲಿ, ಸತ್ಯ ಸಂಗತಿಗಳನ್ನು ದಾಖಲೆಗಳೊಂದಿಗೆ ಜನತೆಯ ಮುಂದಿಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಜಂಟಿ ಸಹಭಾಗಿತ್ವದಲ್ಲಿ ಜಿಲ್ಲೆಯಾದ್ಯಂತ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಅಭಿಯಾನದ ಹಿನ್ನೆಲೆಯಲ್ಲಿ, ಇಂದು ಮಧ್ಯಾಹ್ನ 3 ಗಂಟೆಗೆ ಪುತ್ತೂರಿನಲ್ಲಿ, ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಂಘಟನೆಯಿಂದ ಪ್ರಸ್ತುತ ಪಕ್ಷವಿರೋಧಿ ಸುಳ್ಳು ಆರೋಪಗಳಿಗೆ ನೀಡಲಾದ ವಿವರವಾದ ಉತ್ತರದ ಪೋಸ್ಟರ್ ಬಿಡುಗಡೆ ಮಾಡಲಾಗುತ್ತದೆ.
ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಪ್ರತಿ ಬ್ಲಾಕ್ ಮಟ್ಟದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಂದ್ರಸ್ಥಳಗಳಲ್ಲಿ ಬಿಜೆಪಿ ಆಡಳಿತದ ವೈಫಲ್ಯಗಳನ್ನು ಜನತೆಗೆ ಸ್ಪಷ್ಟಪಡಿಸಿ, ಬಿಜೆಪಿ ಮುಖಂಡರ ನಾಟಕಗಳನ್ನು ಬಹಿರಂಗಪಡಿಸಲಾಗುವುದು.
ಇತಿಹಾಸದಲ್ಲೇ ಮೊದಲ ಬಾರಿಗೆ ಸಂವಿಧಾನದ ಮೂಲಸಿದ್ಧಾಂತಗಳಿಗೆ ವಿರೋಧವಾಗಿ ಪಂಚಾಯತ್ ಚುನಾವಣೆಯನ್ನು 8 ತಿಂಗಳ ಕಾಲ ಮುಂದೂಡಿ, ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯನ್ನು ಅಸ್ಥಿರಗೊಳಿಸಿದ ಬಿಜೆಪಿ ಸರ್ಕಾರದ ನೈಜ ರೂಪವನ್ನು ಜನತೆಗೆ ತೋರಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಗ್ರಾಮೀಣ ಜನತೆಗೆ ಶಕ್ತಿ ನೀಡುವ ಮೂಲಕ ಅವರ ಬದುಕನ್ನು ಸುಧಾರಿಸಿದ ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ನೈತಿಕತೆ ಕುರಿತು ಪ್ರಶ್ನೆಯಲ್ಲಿದ್ದಾರೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ ಕುಳಾಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply