Visitors have accessed this post 545 times.
ಮಂಗಳೂರು: : ಕುಡಿತದ ಅಮಲಿನಲ್ಲಿ ಇಬ್ಬರು ಕಾರ್ಮಿಕರ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ತಣ್ಣೀರು ಬಾವಿ ಟ್ರೀ ಪಾರ್ಕ್ ಬಳಿ ರವಿವಾರ ಬೆಳಗ್ಗೆ ನಡೆದಿದೆ. ಕೊಲೆಯಾದವರನ್ನು ಕೇರಳದ ಕೊಲ್ಲಂ ನಿವಾಸಿ ಬಿನು( 41) ಎಂದು ಗುರುತಿಸಲಾಗಿದ್ದು, ಆರೋಪಿ ಕೇರಳದ ಕಣ್ಣೂರು ಜಿಲ್ಲೆಯ ತಳಿಪ್ಪರಂಬ್ ನಿವಾಸಿ ಜಾನ್ಸನ್ ಯಾನೆ ಬಿನೋಯ್ (52) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಬಿನು ಮತ್ತು ಜಾನ್ಸನ್ ಯಾನೆ ಬಿನೋಯ್ ತಣ್ಣೀರುಬಾವಿಯ ಟ್ರೀ ಪಾರ್ಕ್ ಬಳಿಯ ದೋಣಿ ನಿರ್ಮಾಣ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಅದೇ ಪರಿಸರದಲ್ಲಿ ಬೇರೆ ಬೇರೆ ವಸತಿಯಲ್ಲಿ ವಾಸವಾಗಿದ್ದರು.
ಯಾವುದೋ ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಶನಿವಾರ ರಾತ್ರಿ ಜಗಳವಾಗಿತ್ತು. ಇದೇ ದ್ವೇಷದಿಂದ ಮದ್ಯ ಸೇವಿಸಿ ಬಂದಿದ್ದ ಜಾನ್ಸನ್ ಯಾನೆ ಬಿನೋಯ್ ಬಿನುಗೆ ಚೂರಿ ಇರಿದು ಕೊಲೆ ಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ಆರೋಪಿ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.