Visitors have accessed this post 327 times.
ಬೆಂಗಳೂರು: ಇಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಅವರು ಭಾಗಿಯಾಗಿದ್ದರು.
ಈ ವೇಳೆ ಮುಖ್ಯಮಂತ್ರಿಗಳ ಪಕ್ಕ ಕುಳಿತುಕೊಳ್ಳಲು ನಿರಾಕರಿಸಿದ ಹಾಜಬ್ಬನವರು, ನಿಂತೇ ಸನ್ಮಾನ ಸ್ವೀಕರಿಸಿದ್ದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಪಕ್ಕ ಕುಳಿತುಕೊಳ್ಳಲು ಹಿಂದೇಟು ಹಾಕಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬನವರು, ಸಿಎಂ ಅವರಿಂದ ನಿಂತೇ ಸನ್ಮಾನ ಮಾಡಿಸಿಕೊಂಡರು. ವೇದಿಕೆ ಮೇಲೆ ಪ್ರಶಸ್ತಿ ಸ್ವೀಕರಿಸುವ ಮುನ್ನ ಚಪ್ಪಲಿಯನ್ನು ಕೆಳಗೆ ಬಿಟ್ಟು ಬಂದದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವು ಗಣ್ಯರ ಗಮನ ಸೆಳೆಯಿತು.
ಹರೇಕಳ ಹಾಜಬ್ಬ ಅವರಿಗೆ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ, ಪ್ರಶಸ್ತಿ ಕೊಟ್ಟು ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಈ ವೇಳೆ ಭಾಷಣ ಮಾಡಿದ ಮುಖ್ಯಮಂತ್ರಿಗಳು, ‘ಇಡೀ ಜಗತ್ತು ಇಂದು ಹಿರಿಯರ ದಿನಾಚರಣೆ ಆಚರಿಸುತ್ತಿದೆ. ನಮ್ಮ ಸರ್ಕಾರ ಕೂಡ ಈ ದಿನವನ್ನು ಆಚರಿಸಿಕೊಂಡು ಬಂದಿದೆ. ಬಹಳ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಎಷ್ಟು ವರ್ಷ ಬಾಳುತ್ತೇವೆ ಎಂಬುದಕ್ಕಿಂತ, ಆರೋಗ್ಯದಿಂದ ಬಾಳುವುದು ಉತ್ತಮ’ ಎಂದು ಹೇಳಿದರು.