Visitors have accessed this post 630 times.
ಸುಳ್ಯ:ಎರಡು ದಿನಗಳ ಹಿಂದೆ ಅಂಗಡಿಗೆ ತೆರಳುವುದಾಗಿ ತೆರಳಿ ಬಳಿಕ ನಾಪತ್ತೆಯಾಗಿದ್ದ ಎಂಟನೇ ತರಗತಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಶನಿವಾರ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ.
ಪೆರುವಾಜೆ ಗ್ರಾಮದ ಕುಂಡಡ್ಕ ನಿವಾಸಿ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನ.16ರಂದು ನಾಪತ್ತೆಯಾಗಿದ್ದ. ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ.
ಈ ಬಗ್ಗೆ ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು ಹುಡುಕಾಟ ನಡೆಸುತ್ತಿದ್ದರು. ಶನಿವಾರ ಸಂಜೆ ಮೈಸೂರು ಝೂ ಸಮೀಪ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.