Visitors have accessed this post 737 times.
ಕಾಸರಗೋಡು: ಉಪ್ಪಳದ ಖಾಸಗಿ ಬ್ಯಾಂಕ್ನ ಎಟಿಎಂಗೆ ತುಂಬಿಸಲೆಂದು ಬಂದ ವಾಹನದಿಂದ 50 ಲಕ್ಷ ರೂ. ಹಣ ದರೋಡೆಯಾದ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೃತ್ಯವನ್ನು ತಮಿಳುನಾಡಿನ ತಿರುಟ್ ತಂಡದವರು ಎಂದು ಪೊಲೀಸರಿಗೆ ತಿಳಿದುಬಂದಿದೆ.
ತಮಿಳುನಾಡಿನ ಈ ತಿರುಟ್ ತಂಡದಲ್ಲಿ ಸುಮಾರು 30 ಮಂದಿ ಇದ್ದಾರೆ ಎನ್ನಲಾಗಿದೆ. ಕಳವು, ದರೋಡೆ ಸೇರಿ ಸ್ಪಿರಿಟ್ ಸಾಗಾಟ ದಂಧೆ ತಿರುಟ್ ತಂಡದ ಪ್ರಮುಖ ದಂಧೆಯಾಗಿದೆ. ಈ ಎಲ್ಲಾ ಕೃತ್ಯಗಳನ್ನು ನಡೆಸಿ ಇವರೆಲ್ಲರೂ ಐಶಾರಾಮಿ ಜೀವನ ನಡೆಸುತ್ತಿದ್ದಾರೆ.
ಈ ತಂಡದವರು ಒಂದೇ ಸ್ಥಳದಲ್ಲಿ ನೆಲೆಯೂರದೇ ಅಲೆಮಾರಿಗಳಂತೆ ಅಲೆದಾಡುತ್ತಿರುತ್ತಾರೆ. ದರೋಡೆ ಮಾಡುವ ಮುಂಚೆ ಸ್ಥಳವನ್ನು ಪರಿಚಯ ಮಾಡಿಕೊಂಡು ಸ್ಕೆಚ್ ಹಾಕುತ್ತಾರೆ. ತಿರುಟ್ ತಂಡ ಎಟಿಎಂಗೆ ತುಂಬಿಸಲು ತಂದಿದ್ದ ಹಣವನ್ನು ಕಳವು ಮಾಡಲು ಮಂಗಳೂರಿನಿಂದ ಬಂದು ಕಳವು ಮಾಡಿದ ಬಳಿಕ ಆಟೋ ರಿಕ್ಷಾದಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇನ್ನು ಕಾಸರಗೋಡಿನಿಂದ ರೈಲಿನಲ್ಲಿ ಎಲ್ಲಿಗೆ ಹೋದರೆಂದು ಪೊಲೀಸರಿಗೆ ತಿಳಿದುಬಂದಿಲ್ಲ. ಈ ಹಿನ್ನೆಲೆ ಕೇರಳ ಪೊಲೀಸರು ಕರ್ನಾಟಕ, ತಮಿಳುನಾಡು ಪೊಲೀಸರ ನೆರವು ಯಾಚಿಸಿದ್ದಾರೆ.