ಮಂಗಳೂರು : ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಕಾಮನ್ವೆಲ್ತ್ ಸಂಸದೀಯ ಸಂಘ, ಕರ್ನಾಟಕ ಶಾಖೆ ಇದರ ಪ್ರತಿನಿಧಿಯಾಗಿ ಆಸ್ಟ್ರೇಲಿಯಾ ದೇಶದ ಸಿಡ್ನಿಯಲ್ಲಿ ನವೆಂಬರ್ 5 ರಿಂದ 8ವರೆಗೆ ನಡೆಯಲಿರುವ 67ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭ ಅಕ್ಟೋಬರ್ 25 ರಿಂದ 28ರವರೆಗೆ ದಕ್ಷಿಣ ಕೊರಿಯಾ ದೇಶದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಈ ಅಧ್ಯಯನ ಪ್ರವಾಸ ಸಂದರ್ಭದಲ್ಲಿ ಸ್ಪೀಕರ್ ಅವರು ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಭಾರತದ ರಾಯಭಾರಿ ಅಮಿತ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದರು. ಈ ಭೇಟಿಯ ಸಂದರ್ಭ ಉಭಯ ದೇಶಗಳ ಸಂಬಂಧಗಳು, ಶಿಕ್ಷಣ, ವ್ಯಾಪಾರ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಅನೌಪಚಾರಿಕವಾಗಿ ಚರ್ಚಿಸುತ್ತಾ, ದಕ್ಷಿಣ ಕೊರಿಯಾ ದೇಶದ. ಕರ್ನಾಟಕದಲ್ಲಿ ಹೂಡಿಕೆಯ ನಿರೀಕ್ಷೆಗಳು/ಅವಕಾಶಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.
ಸಭಾಧ್ಯಕ್ಷರು ಕರ್ನಾಟಕದ ವಿಶ್ವವಿದ್ಯಾಲಯಗಳು ಕೊರಿಯಾ ದೇಶದ ವಿವಿಗಳೊಂದಿಗೆ ಕಾಲೇಜುಗಳಲ್ಲಿನ ವಿವಿಧ ಕೋರ್ಸ್ಗಳ ಮತ್ತು ಉದ್ಯೋಗಾವಕಾಶಗಳ ಕುರಿತು ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳುವ ಬಗ್ಗೆ ಭಾರತದ ರಾಯಭಾರಿಗಳೊಂದಿಗೆ ಚರ್ಚಿಸಿದರು. ಉಭಯ ದೇಶಗಳ ಮೂಲಸೌಲಭ್ಯಗಳು, ಆರ್ಥಿಕತೆ ಕುರಿತಾಗಿ ಚರ್ಚಿಸಿ ಈ ಭೇಟಿಯು ಫಲಪ್ರದವಾಗಿದ್ದು, ವಿಶೇಷವಾಗಿ ದಕ್ಷಿಣ ಕೊರಿಯಾ ಮತ್ತು ಕರ್ನಾಟಕದ ನಡುವಿನ ಸಂಬಂಧಗಳು ಇನ್ನು ಹೆಚ್ಚಿನ ರೀತಿ ಬೆಳೆಯಲಿ ಎಂದು ಸಭಾಧ್ಯಕ್ಷರು ಆಶಿಸಿದರು.