
ಕಾರವಾರ : ಶೈಕ್ಷಣಿಕ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಕಡಲ ತೀರದಲ್ಲಿ ಈ ದುರ್ಘಟನೆ ನಡೆದಿದೆ. ಇಂದು (ಡಿಸೆಂಬರ್ 10) ಸಂಜೆ ಕಡಲ ತೀರದಲ್ಲಿ ಆಟವಾಡುತ್ತಿದ್ದ 54 ವಿದ್ಯಾರ್ಥಿಗಳ ಪೈಕಿ ನಾಲ್ಕು ಬಾಲಕರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸದ್ಯ ಓರ್ವ ವಿದ್ಯಾರ್ಥಿ ಶವ ಪತ್ತೆಯಾಗಿದ್ದು, ಇನ್ನುಳಿದ ಮೂವರು ವಿದ್ಯಾರ್ಥಿಗಳಿಗೆ ಶೋಧ ಕಾರ್ಯ ನಡೆದಿದೆ.



ಕೋಲಾರದ ಮುಳಬಾಗಿಲಿನಿಂದ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು, 6 ಶಿಕ್ಷಕರು ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಮುರುಡೇಶ್ವರ ಬೀಚ್ನಲ್ಲಿ ಇಂದು ಸಂಜೆ ಮುರ್ಡೇಶ್ವರ ಬೀಚ್ನಲ್ಲಿ ಆಟವಾಡುತ್ತಿದ್ದಾರೆ. ಈ ವೇಳೆ ಏಕಾಏಕಿ ನಾಲ್ವರು ವಿದ್ಯಾರ್ಥಿಗಳು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.
ಏಳು ಜನ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ಈ ಪೈಕಿ ಮೂರು ಜನ ವಿದ್ಯಾರ್ಥಿನಿಯರಾದ ಯಶೋಧ, ವೀಕ್ಷಣಾ, ಲಿಪಿಕಾ ಎನ್ನುವರನ್ನು ರಕ್ಷಣೆ ಮಾಡಲಾಗಿದೆ. ಇನ್ನು 9ನೇ ತರಗತಿ ಓದುತ್ತಿದ್ದ ಮುಳಬಾಗಲು ತಾಲ್ಲೂಕಿನ ಪೂಜಾರಹಳ್ಳಿ ಗೋಪಾಲಪ್ಪ ಎಂಬುವವರ ಪುತ್ರಿ ಶ್ರಾವಂತಿ ಮೃತಪಟ್ಟಿದ್ದು, ಇದೀಗ ಮೃದೇಹವನ್ನು ಹೊರತೆಗೆಯಲಾಗಿದೆ. ಇನ್ನುಳಿದಂತೆ ಮುಳಬಾಗಲು ತಾಲ್ಲೂಕಿನ ಎನ್.ಗಡ್ಡೂರು ನಿವಾಸಿ ಜೈರಾಮಪ್ಪ ಪುತ್ರಿ ದೀಕ್ಷ, ಹಬ್ಬಣಿ ಗ್ರಾಮದ ಚನ್ನರೆಡ್ಡಪ್ಪ ಪುತ್ರಿ ಲಾವಣ್ಯ, ದೊಡ್ಡಗಟ್ಟಹಳ್ಳಿಯ ಮುನಿರಾಜು ಪುತ್ರಿ ವಂದನ ಕಾಣೆಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆದಿದೆ.
ರಕ್ಷಿಸಲಾಗದೆ ಅಸಹಾಯಕರಾದ ಲೈಫ್ ಗಾರ್ಡ್ಸ್!
ಇನ್ನು ಕಳೆದ ಎರಡು ತಿಂಗಳಿನಿಂದ ಯಾವುದೇ ಸಲಕರಣೆ ಪೂರೈಸದ ಹಿನ್ನೆಲೆಯಲ್ಲಿ ಮಕ್ಕಳನ್ನ ರಕ್ಷಿಸಲಾಗದೆ ಲೈಫ್ ಗಾರ್ಡ್ಸ್ ಅಸಹಾಯಕರಾಗಿದ್ದಾರೆ. ಲೈಫ್ ಗಾರ್ಡ್ ಗಳಿಗೆ ಅಗತ್ಯ ಸಲಕರಣೆ ಒದಗಿಸುವಂತೆ ಸುದ್ದಿ ಮಾಡಿದ್ದರೂ ಸಹ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೆವೆ ಸಲಕರಣೆ ಸಮಸ್ಯೆ ಬಗೆಹರಿಸುವ ಅಶ್ವಾಸನೆಯನ್ನು ಸಚಿವ ಮಂಕಾಳು ವೈದ್ಯ ನೀಡಿದ್ದರು. ಆದ್ರೆ ಅದು ಭರವಸೆಯಾಗಿಯೇ ಉಳಿದಿದೆ.
ಕೆಲವು ದಿನಗಳ ಹಿಂದೆ ಮುರುಡೇಶ್ವರದಲ್ಲಿ ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಆದರೂ ಸಹ ಅಗತ್ಯ ಸಲಕರಣೆ ಇಲ್ಲದ ಕಾರಣ ಲೈಫ್ ಗಾರ್ಡ್ಸ್ಗಳು ಸಮುದ್ರಕ್ಕೆ ಇಳಿದಿರಲಿಲ್ಲ. ಹೀಗಾಗಿ ತಾಲೂಕಾಡಳಿತ ಪ್ರವಾಸಿಗರನ್ನು ಕಡಲ ತೀರಕ್ಕೆ ನಿರ್ಬಂಧಿಸಿತ್ತು. ಬಳಿಕ ಕಳೆದ ಒಂದು ತಿಂಗಳಿನಿಂದ ನಿರ್ಬಂಧ ತೆರವುಗೊಳಿಸಿತ್ತು. ಆದ್ರೆ ಸುರಕ್ಷತೆ ಕ್ರಮ ಕೈಗೊಂಡಿಲ್ಲ.