
ಬಂಟ್ವಾಳ : ಸೌದಿ ಅರೇಬಿಯಾದ ತಬೂಕ್ ಸಮೀಪದ ಅಲ್ ಉಲಾ ಎಂಬ ಪ್ರದೇಶದಲ್ಲಿ ಸೋಮವಾರ ನಡೆದ ಕಾರು ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಮೇಲಿನ ವಗ್ಗ ನಿವಾಸಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.ಮೃತ ಯುವಕನನ್ನು ಮೇಲಿನ ವಗ್ಗದ ಈಗಲ್ ಕುಟುಂಬದ ದಿವಂಗತ ಮುಹಮ್ಮದ್ ಯಾನೆ ಪುತ್ತೂಬಾವ ಎಂಬವರ ಪುತ್ರ ಇಬ್ರಾಹೀಮ್ ನವಾಜ್ (35) ಎಂದು ಹೆಸರಿಸಲಾಗಿದೆ.



ಈ ಹಿಂದೆ ಊರಿನಲ್ಲಿ ಬಿ ಸಿ ರೋಡು ಸಮೀಪದ ಮಿತ್ತಬೈಲು ಎಂಬಲ್ಲಿ ಟಾಪ್ ಆಂಡ್ ಟಾಪ್ ಹೆಸರಿನ ಕಾರು ಉದ್ಯಮ ನಡೆಸುತ್ತಿದ್ದು ಟಾಪ್ ಆಂಡ್ ಟಾಪ್ ನವಾಜ್ ಎಂದೇ ಗುರುತಿಸಿಕೊಂಡಿದ್ದ.ಬಳಿಕ ಬೆಂಗಳೂರು ನಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ಇವರು ಇತ್ತೀಚಿಗೆ ಸುಮಾರು ಆರು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಸೋಮವಾರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅವರು ಮೃತ್ತಾಪಟ್ಟಿದ್ದಾರೆ ಎನ್ನಲಾಗಿದೆ. ಈತ ವಗ್ಗ ನಿವಾಸಿ, ಕಾಂಗ್ರೆಸ್ ಮುಖಂಡ, ಬೀಡಿ ಉದ್ಯಮಿ ಇ ಕೆ ಲತೀಫ್ ಅವರ ಸಹೋದರಿಯ ಪುತ್ರ.ಮೃತರು ಪತ್ನಿ, ತಾಯಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹ ಬುಧವಾರ ಅಸರ್ ನಮಾಜ್ ಬಳಿಕ ಅಲ್ ಉಲಾ ಸೂಕ್ ಅಲ್ ಕುದ್ರಾ ಬಳಿಯ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.