
ಬೆಳ್ತಂಗಡಿ: ನಾಪತ್ತೆಯಾಗಿದ್ದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ನಡೆದಿದೆ.



ಹರೀಶ್ ಗೌಡ (24) ಮತ್ತು ಸುಹಾನ (19) ಪ್ರೀತಿಸಿ ಮದುವೆಯಾದ ಹಿಂದೂ-ಮುಸ್ಲಿಂ ಜೋಡಿ. ಹರೀಶ್ ಗೌಡ ಹಾಗೂ ಸುಹಾನ ಫೇಸ್ಬುಕ್ನಲ್ಲಿ ಪರಿಚಿತರಾಗಿದ್ದರು. ಬಳಿಕ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದಿದ್ದರು.
ಇತ್ತೀಚೆಗೆ ಕಂಪ್ಯೂಟರ್ ಕ್ಲಾಸ್ಗೆ ಹೋಗಿದ್ದ ಸುಹಾನ ನಾಪತ್ತೆ ಆಗಿದ್ದಳು. ಆದ್ದರಿಂದ ಆಕೆಯ ಮನೆಯವರು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇದೀಗ ಇಬ್ಬರೂ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ಪತ್ತೆಯಾಗಿದ್ದಾರೆ. ಮದುವೆಯಾದ ಜೋಡಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿದೆ.
ಪೊಲೀಸ್ ಮುಂದೆ ಯುವತಿ ತಾನು ಸ್ವಇಚ್ಛೆಯಿಂದ ಮದುವೆ ಆಗಿರುವುದಾಗಿ ಹೇಳಿಕೆ ನೀಡಿದ್ದಾಳೆ.