ಕಡಬ: ಕೂರತ್ ತಂಙಳ್ ಉರೂಸ್’ನಲ್ಲಿ ಉಸಿರುಗಟ್ಟಿ ಹಲವರು ಅಸ್ವಸ್ಥ..!!

ಪುತ್ತೂರು ಕಡಬ: ಕುದ್ಮಾರ್ ಕೂರತ್ ಫಝಲ್ ನಗರದಲ್ಲಿ `ಕೂರತ್ ತಙಳ್’ ಎಂದೇ ಪ್ರಸಿದ್ಧರಾಗಿದ್ದ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ಅಲ್ ಬುಖಾರಿ ಅವರ ಸ್ಮರಣಾರ್ಥ ನಡೆದ ವಾರ್ಷಿಕ ಉರೂಸ್ ಮುಬಾರಕ್‌ನ ಕೊನೆಯ ದಿನವಾದ ಭಾನುವಾರ ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದ ಪರಿಣಾಮ, ನೂಕುನುಗ್ಗಲಿನಲ್ಲಿ ಉಸಿರುಗಟ್ಟಿ ಹಲವರು ಅಸ್ವಸ್ಥಗೊಂಡ ಘಟನೆ ನಡೆದಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಗಂಟೆಗಟ್ಟಲೆ ಪರದಾಡಿದರು.

ಜೂನ್ 26ರಿಂದ 29ರವರೆಗೆ ಆಯೋಜಿಸಲಾಗಿದ್ದ ಉರೂಸ್‌ನ ಅಂತಿಮ ದಿನದ ಪ್ರಾರ್ಥನೆ ಹಾಗೂ ಅನ್ನದಾನ ಕಾರ್ಯಕ್ರಮಕ್ಕೆ ಸುಮಾರು 30-40 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿತ್ತು. ಆದರೆ, ತಂಜಳ್ ಅವರ ಮೇಲಿನ ಅಭಿಮಾನದಿಂದಾಗಿ ರಾಜ್ಯದ ನಾನಾ ಭಾಗಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಜನಸಂದಣಿ ಹೆಚ್ಚಾಗುತ್ತಿದ್ದಂತೆ ಮಾಡಿಕೊಂಡ ವ್ಯವಸ್ಥೆಗಳು ಸಾಕಾಗಲಿಲ್ಲ.

ಕಿಕ್ಕಿರಿದು ತುಂಬಿದ್ದ ಜನಸಂದಣಿಯಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ ಹಸ್ನಾ (18), ಪಾಯಿಝಾ (18), ಸಮ್ರನ್ (19), ಮೈಮೂನಾ (36) ಸೇರಿದಂತೆ ಆರು ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇನ್ನೂ ಮೂವರನ್ನು ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯವಾಗಿ ಆರೋಗ್ಯ ಇಲಾಖೆ ತೆರೆದಿದ್ದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

ಮಧ್ಯಾಹ್ನದ ಅನ್ನದಾನದ ಸಂದರ್ಭದಲ್ಲಿ ಊಟ ಖಾಲಿಯಾದಾಗ ಸರತಿ ಸಾಲಿನಲ್ಲಿ ತಳ್ಳಾಟ ಉಂಟಾಗಿ ಈ ಘಟನೆ ಸಂಭವಿಸಿದೆ ಎಂದು ಕೆಲವು ಮೂಲಗಳು ತಿಳಿಸಿವೆ.

ತುರ್ತು ಸೇವೆಗೂ ಅಡ್ಡಿ

ಅಸ್ವಸ್ಥಗೊಂಡ ಮಹಿಳೆಯರಿದ್ದ ಸ್ಥಳಕ್ಕೆ ಆಂಬುಲೆನ್ಸ್ ತಲುಪಿಸಲು ಆಯೋಜಕರು ಮತ್ತು ಪೊಲೀಸರು ಹರಸಾಹಸ ಪಡಬೇಕಾಯಿತು. ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಸುಮಾರು 20 ರಿಂದ 30 ಆಂಬುಲೆನ್ಸ್‌ಗಳು ಸ್ಥಳಕ್ಕೆ ದೌಡಾಯಿಸಿದೆ. ಜನಜಂಗುಳಿಯ ಕಾರಣ ಅವುಗಳಿಗೆ ದಾರಿ ಮಾಡಿಕೊಡಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಂಚಾರ ಅಸ್ತವ್ಯಸ್ತ

ಭಾನುವಾರ ಮುಂಜಾನೆಯಿಂದಲೇ ಲಕ್ಷಾಂತರ ಮಂದಿ ವಾಹನಗಳಲ್ಲಿ ಆಗಮಿಸಿದ್ದರಿಂದ ಉರೂಸ್ ನಡೆಯುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ಸಂಚಾರ ದಟ್ಟಣೆ ಉಂಟಾಗಿತ್ತು. ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯ ಸವಣೂರಿನಿಂದ ಬರೆಪ್ಪಾಡಿಯವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕುದ್ಮಾರ್ ಸುತ್ತಮುತ್ತ ಸುಮಾರು 2ಕಿ.ಮೀ. ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಾಣಿಲ ಕುದ್ಮಾರು, ಶಾಂತಿಮೊಗರು-ಆಲಂಕಾರು ರಸ್ತೆಗಳಲ್ಲೂ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ನಿರೀಕ್ಷೆಗಿಂತ ಹಲವು ಪಟ್ಟು ಹೆಚ್ಚು ಜನರು ಬಂದಿದ್ದರಿಂದ ಮಾಡಿದ ವ್ಯವಸ್ಥೆಗಳು ವಿಫಲವಾದವು ಎಂದು ಸ್ಥಳೀಯರು ದೂರಿದ್ದಾರೆ.

Leave a Reply