
ಮಂಗಳೂರು: ಇಲ್ಲಿನ ಸಸಿಹಿತ್ಲು ಮೂಂಡಾ ಬೀಚ್ ಬಳಿ ಸಮುದ್ರಕ್ಕೆ ಇಳಿದಿದ್ದ 4 ಮಂದಿಯ ಪೈಕಿ ಓರ್ವ ಮೃತಪಟ್ಟು ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ಎಂಬಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಮೃತ ಯುವಕ ಪಡುಪಣಂಬೂರು ಕಜಕತೋಟ ನಿವಾಸಿ ದಿ.ಅನ್ವರ್ ಎಂಬವರ ಪುತ್ರ ಮುಹಮ್ಮದ್ ಸಮೀರ್ (23) ಎಂದು ತಿಳಿದು ಬಂದಿದೆ.
ಪಡುಪಣಂಬೂರು ಕಜಕತೋಟ ನಿವಾಸಿ ಅಬೂಬಕರ್ ಎಂಬವರ ಪುತ್ರ ಐಮಾನ್ (23), ಕಜಕತೋಟ ನಿವಾಸಿ ರಯೀಸ್ (22), ಹಳೆಯಂಗಡಿ ಬೊಳ್ಳೂರು ನಿವಾಸಿ ಹನೀಫ್ ಎಂಬವರ ಪುತ್ರ ಫಾಝಿಲ್ ಎಂಬವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಒಂದೇ ಕುಟುಂಬದ ಆರು ಮಂದಿ ಸಹೋದರರ ಮಕ್ಕಳು ರವಿವಾರ ಸಂಜೆ ಸಸಿಹಿತ್ಲು ಮೂಂಡಾ ಬೀಚ್ಗೆ ವಿಹಾರಕ್ಕೆಂದು ತೆರಳಿದ್ದರು. ಅವರು ನೀರಿನಲ್ಲಿ ಆಡುತ್ತಿದ್ದ ಸಂದರ್ಭ ಬೃಹತ್ ಅಲೆಯ ಸೆಳೆತಕ್ಕೆ ಸಿಲುಕಿ ಮುಹಮ್ಮದ್ ಸಮೀರ್, ಐಮಾನ್, ಫಾಝಿಲ್ ಸಮುದ್ರ ಪಾಲಾಗುತ್ತಿದ್ದರು. ಈ ವೇಳೆ ದಡದಲ್ಲಿದ್ದವರು ಬೊಬ್ಬೆ ಹಾಕಿದ್ದು, ಬೊಬ್ಬೆಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ಮೀನುಗಾರ ನಿವಾಸಿಗಳು ಮೂವರನ್ನೂ ರಕ್ಷಿಸಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಐಮಾಮ್ ಮತ್ತು ಫಾಝಿಲ್ ಅಪಾಯದಿಂದ ಪಾರಾಗಿದ್ದು, ಮುಹಮ್ಮದ್ ಸಮೀರ್ ಮೃತಪಟ್ಟರೆಂದು ತಿಳಿದು ಬಂದಿದೆ.