March 25, 2026
WhatsApp Image 2026-03-25 at 2.30.12 PM

ಕೇರಳ: ಕುಂಭಮೇಳದ ಸುಂದರಿ ಎಂದೇ ಪ್ರಖ್ಯಾತಿ ಪಡೆದಿದ್ದ ಮೊನಾಲಿಸಾ ಭೋಂಸ್ಲೆ ಮುಸ್ಲಿಂ ಸಮುದಾಯದ ಫರ್ಮಾನ್‌ ಖಾನ್‌ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಖತ್‌ ಸುದ್ದಿಯಾಗಿದ್ದರು. ಆದರೀಗ ಮದುವೆ ನಂತರ ಅನುಭವಿಸುತ್ತಿರುವ ಸಂಕಷ್ಟಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹಾಗೆಯೇ ಮೊದಲ ಸಿನಿಮಾ ಆಫರ್‌ ನೀಡಿದ್ದ ನಿರ್ದೇಶಕ ಸನೋಜ್‌ ಮಿಶ್ರಾ ವಿರುದ್ದ ಕಿರುಕುಳ ಆರೋಪ ಹೊರಿಸಿದ್ದಾರೆ.

ಹೌದು.. ಕೆಲವು ದಿನಗಳ ಹಿಂದಷ್ಟೇ ಉತ್ತರ ಭಾರತದ ಮೊನಾಲಿಸಾ ಮಹಾರಾಷ್ಟ್ರದ ಯುವಕನೊಂದಿಗೆ ಕೇರಳದಲ್ಲಿ ಮದುವೆ ಆಗಿದ್ದರು. ಈ ಮದುವೆ ವಿಚಾರ ಗೊತ್ತಾಗುತ್ತಿದ್ದಂತೆ ಮೊನಾಲಿಸಾ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದು ಪೊಲೀಸ್‌ ಠಾಣೆ ವರೆಗೂ ಹೋಗಿತ್ತು. ಈ ನಡುವೆ ಫರ್ಮಾನ್‌ ಖಾನ್‌ ತಂದೆಯಿಂದಲೂ ಈ ಅಂತರ್‌ಧರ್ಮೀಯ ವಿವಾಹಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೇ ವೇಳೆ ಮೊನಾಲಿಸಾ ಅವರ ಚೊಚ್ಚಲ ಸಿನಿಮಾ ʼದಿ ಡೈರಿ ಆಫ್‌ ಮಣಿಪುರʼದ ನಿರ್ದೇಶಕ ಸನೋಜ್‌ ಮಿಶ್ರಾ ಗಂಭೀರ ಆರೋಪ ಮಾಡಿದ್ದರು. ಇದು ಲವ್‌ ಜಿಹಾದ್‌ ಎಂದಿದ್ದರು. ಈ ಬಗ್ಗೆ ಮೊನಾಲಿಸಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮೊನಾಲಿಸಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ನಮ್ಮ ಮುಂದೆ ಈಗ ಒಂದೇ ದಾರಿ ಉಳಿದಿದೆ. ದೆಹಲಿ, ಮಧ್ಯಪ್ರದೇಶ ಅಥವಾ ಕೇರಳ ಸರ್ಕಾರ ನಮಗೆ ಸಹಾಯ ಮಾಡದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಪೋಸ್ಟರ್‌ಗಳನ್ನು ಸಾರ್ವಜನಿಕವಾಗಿ ಸುಡಲಾಗುತ್ತಿದೆ. ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತನ್ನ ವಿರುದ್ದ ಗಂಭೀರ ಆರೋಪ ಹೊರಿಸಿದ್ದ ನಿರ್ದೇಶಕ ಸನೋಜ್‌ ಮಿಶ್ರಾ ಕುರಿತು ಮೊನಾಲಿಸಾ ಕಿರುಕುಳ ಆರೋಪ ಮಾಡಿದ್ದಾರೆ. ಸನೋಜ್‌ ಮಿಶ್ರಾ ಅಂತಹ ಕೆಟ್ಟ ವ್ಯಕ್ತಿಯ ಹೆಸರನ್ನು ಹೇಳಲು ನನಗೆ ಅಸಹ್ಯವಾಗುತ್ತಿದೆ. ಅವರು ಸಿನಿಮಾದ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರು ಹೇಳುವಂತೆ ನಾನು ಅವರ ಸಿನಿಮಾದ ಭಾಗವಾಗಲು ನನಗೂ ಇಷ್ಟವಿಲ್ಲ. ದಯವಿಟ್ಟು ಸರ್ಕಾರ ನಮಗೆ ಮತ್ತು ನನ್ನ ಪತಿಗೆ ರಕ್ಷಣೆ ನೀಡಲಿ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ʼಶೂಟಿಂಗ್‌ ಸಮಯದಲ್ಲಿ ಸನೋಜ್‌ ಮಿಶ್ರ ಹಲವಾರು ಬಾರಿ ಅವರ ದೇಹದ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದರು. ಮನೆಯಲ್ಲಿ ಆ ಕಹಿ ಅನುಭವದ ಬಗ್ಗೆ ನಾನು ಅವರಿಗೆ ಹೇಳಿದಾಗ ಬೆಂಬಲ ಸಿಗಲಿಲ್ಲ. ಅದು ನನ್ನ ಮೊದಲ ಸಿನಿಮಾ ಮತ್ತು ನಾನು ಹೊಂದಿಕೊಳ್ಳಬೇಕಾಯಿತು. ನಾನು ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ ನಾನು ಮೌನವಾಗಿದ್ದೆʼ ಎಂದು ಅವರು ಹೇಳಿದ್ದಾರೆ. ತಮ್ಮ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿದ್ದಕ್ಕೆ ಕಾರಣ ತನ್ನ ಮೇಲಿನ ದ್ವೇಷ ಎಂದು ಅವರು ಹೇಳಿದರು. ನನ್ನ ಮದುವೆಯ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ನಿರ್ದೇಶಕರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಅವರು ಹೇಳಿದರು.  

About The Author

Leave a Reply