

ಅಮರಾವತಿ: ದೇಶದ ವಿವಿಧ ರಾಜ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಕರ್ನಾಟಕದ ಒಬ್ಬ ವ್ಯಕ್ತಿ ಸೇರಿದಂತೆ ಒಟ್ಟು 12 ಮಂದಿ ಶಂಕಿತರನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ನಿಷೇಧಿತ ಉಗ್ರ ಸಂಘಟನೆಗಳಾದ ಅಲ್ ಖೈದಾ ಮತ್ತು ಐಸಿಸ್ (ISIS) ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕರ್ನಾಟಕ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿ ಆಂಧ್ರ ಪೊಲೀಸರು ಈ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ.’ಸಲಾಂ’ ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ ತಂಡವನ್ನು ಮಟ್ಟಹಾಕಲಾಗಿದೆ.
ಯುವಕರ ಹಾದಿ ತಪ್ಪಿಸುವ ಯತ್ನ: ಆಂಧ್ರದ ಮೂವರು ಶಂಕಿತರು ಸೇರಿ ‘ಅಲ್ ಮಾಲಿಕ್ ಇಸ್ಲಾಮಿಕ್ ಯೂತ್’ ಎಂಬ ಗುಂಪನ್ನು ರಚಿಸಿಕೊಂಡು, ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ತೀವ್ರಗಾಮಿ ಚಿಂತನೆಗಳತ್ತ ಸೆಳೆಯುತ್ತಿದ್ದರು.
ಬಂಧಿತ ತಂಡವು ಉಗ್ರ ಒಸಾಮಾ ಬಿನ್ ಲಾಡೆನ್ ರೀತಿಯಲ್ಲೇ ಉಡುಪು ಧರಿಸಿ, ಅವನ ನಡವಳಿಕೆಗಳನ್ನೇ ಅನುಕರಿಸುತ್ತಿದ್ದರು ಎಂದು ವರದಿಯಾಗಿದೆ. ಭಾರತವನ್ನು ‘ಇಸ್ಲಾಮಿಕ್ ರಾಜ್ಯ’ವನ್ನಾಗಿ ಮಾಡುವ ಗುರಿ ಹೊಂದಿದ್ದ ಈ ತಂಡ, ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳುವ ಯೋಜನೆಯನ್ನೂ ರೂಪಿಸಿತ್ತು. ಈ ಜಾಲದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇನ್ನೂ ಹಲವರು ಸಿಕ್ಕಿಬೀಳುವ ಸಾಧ್ಯತೆಯಿದೆ.






