

ಪತ್ನಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭಾರತೀಯ ಸೇನೆಯ ಮಾಜಿ ಕ್ಯಾಪ್ಟನ್ ನನ್ನು ಬಂಧಿಸಲು ಪೊಲೀಸರಿಗೆ LPG ಸಿಲಿಂಡರ್ ಬುಕ್ಕಿಂಗ್ ನೆರವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಾಜಿ ಕ್ಯಾಪ್ಟನ್ ಸಂದೀಪ್ ತೋಮರ್ ನನ್ನು ಮಧ್ಯಪ್ರದೇಶದ ಪಂಧುರ್ನಾ ಜಿಲ್ಲೆಯಿಂದ ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.

ತೋಮರ್ ನನ್ನು 2013ರಲ್ಲಿ ಅಬೋಹರ್ನಲ್ಲಿ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆತ ಪತ್ನಿ ಶ್ವೇತಾ ಸಿಂಗ್ ಅವರನ್ನು ಹತ್ಯೆಗೈದಿದ್ದ. ಆರಂಭದಲ್ಲಿ ಈ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಈತ ಪ್ರಯತ್ನಿಸಿದ್ದ. ಆದರೆ, ವಿಸ್ತೃತ ತನಿಖೆಯಿಂದ ಅದು ಯೋಜಿತ ಹತ್ಯೆ ಎಂಬುದು ಬಹಿರಂಗಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣಾ ನ್ಯಾಯಾಲಯ 2014ರಲ್ಲಿ ತೋಮರ್ ದೋಷಿ ಎಂದು ಪರಿಗಣಿಸಿ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಈ ತೀರ್ಪನ್ನು ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ 2022ರಲ್ಲಿ ಎತ್ತಿ ಹಿಡಿದಿತ್ತು. 2019ರಲ್ಲಿ ತೋಮರ್ಗೆ ಜಾಮೀನು ನೀಡಲಾಗಿತ್ತು. ಆದರೆ, ಉಚ್ಚ ನ್ಯಾಯಾಲಯ 2022ರಲ್ಲಿ ಶಿಕ್ಷೆಯನ್ನು ಎತ್ತಿ ಹಿಡಿದ ಬಳಿಕವೂ ಆತ ಶರಣಾಗತನಾಗಿರಲಿಲ್ಲ.
ಅಂದಿನಿಂದ ಬಂಧನದಿಂದ ತಪ್ಪಿಸಿಕೊಳ್ಳಲು ಆತ ತಾನಿರುವ ಸ್ಥಳ ಮತ್ತು ಗುರುತನ್ನು ನಿರಂತರವಾಗಿ ಬದಲಾಯಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತೋಮರ್ ನ ಮಾವ ರಾಮ್ ನರೇಶ್ 2024ರಲ್ಲಿ ಆತನನ್ನು ಬಂಧಿಸುವಂತೆ ಒತ್ತಾಯಿಸಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅನಂತರ ಉಚ್ಚ ನ್ಯಾಯಾಲಯ ತೋಮರ್ನನ್ನು ವಶಕ್ಕೆ ತೆಗೆದುಕೊಳ್ಳಲು ಕೈಗೊಂಡ ಕ್ರಮಗಳ ಕುರಿತು ವಿವರಿಸಿ, ಏಪ್ರಿಲ್ 8ರೊಳಗೆ ಅಫಿಡಾವಿಟ್ ಸಲ್ಲಿಸುವಂತೆ ಪಂಜಾಬ್ ಡಿಜಿಪಿಗೆ ಆದೇಶಿಸಿತ್ತು. ಬಳಿಕ ಫಾಝಿಲ್ಕಾದ ಹಿರಿಯ ಪೊಲೀಸ್ ಅಧೀಕ್ಷಕರು ತೋಮರ್ ನನ್ನು ಬಂಧಿಸಲು ಎಸ್ಪಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದರು.
ಫಾಝಿಲ್ಕಾ ಪೊಲೀಸರು ತೋಮರ್ ನ ಪಾನ್ ಕಾರ್ಡ್ಗೆ ಜೋಡಣೆಯಾಗಿದ್ದ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಮಹತ್ವದ ಸುಳಿವು ಸಿಕ್ಕಿತು. ಈ ಖಾತೆಯನ್ನು ಆತ LPG ಸಿಲಿಂಡರ್ ಬುಕ್ ಮಾಡಲು ಬಳಸಿದ್ದ. ಈ ಸುಳಿವಿನ ಆಧಾರದಲ್ಲಿ ಪೊಲೀಸರು ಮಧ್ಯಪ್ರದೇಶದಲ್ಲಿ ಆತನ ಇರುವಿಕೆಯನ್ನು ಪತ್ತೆ ಹಚ್ಚಿ ಬಂಧಿಸಿದರು.






