April 6, 2026
WhatsApp Image 2026-04-06 at 11.18.17 AM

ದೆಹಲಿಯಲ್ಲಿ ಭೀಕರ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ದೆಹಲಿ ವಿಶೇಷ ಪೊಲೀಸ್ ಘಟಕ ಮತ್ತು ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಮುಂಬೈನಲ್ಲಿ ಬಂಧಿಸಿವೆ.

ಬಂಧಿತರನ್ನು ಮುಂಬೈ ನಿವಾಸಿಗಳಾದ ಮೊಸಾಬ್ ಅಹಮದ್ ಅಲಿಯಾಸ್ ಕಲಾಂ ಕಲ್ಯಾಣ್ ಮತ್ತು ಮೊಹಮ್ಮದ್ ಹಮದ್ ಕೊಲ್ಲಾರ ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರನ್ನೂ ಹೆಚ್ಚಿನ ವಿಚಾರಣೆಗಾಗಿ ರಾಷ್ಟ್ರ ರಾಜಧಾನಿ ನವದೆಹಲಿಗೆ ಕರೆತರಲಾಗಿದೆ.

ತನಿಖೆಯ ಪ್ರಮುಖ ಅಂಶಗಳು:

ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕ: ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತರು ಜೈಶ್-ಎ-ಮೊಹಮ್ಮದ್ (JeM) ಮತ್ತು ಇಸ್ಲಾಮಿಕ್ ಸ್ಟೇಟ್ (ISIS) ನಂತಹ ನಿಷೇಧಿತ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಆನ್‌ಲೈನ್ ಮೂಲಕ ಆಮೂಲಾಗ್ರೀಕರಣ: ಇವರು ‘ಮಿಷನ್ ಖಿಲಾಫತ್’ ಮತ್ತು ‘ಸೋಲ್ಜರ್ಸ್ ಆಫ್ ಪ್ರಾಫೆಟ್’ ಎಂಬ ಆನ್‌ಲೈನ್ ಉಗ್ರಗಾಮಿ ಗುಂಪುಗಳಲ್ಲಿ ಸಕ್ರಿಯರಾಗಿದ್ದರು. ಆನ್‌ಲೈನ್ ಹ್ಯಾಂಡ್ಲರ್ ಆಗಿರುವ ಅಬು ಹುಫೆಜಾ ಎಂಬಾತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆತನಿಂದ ಪ್ರಭಾವಿತರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಟದ ಕಾರಿನ ಮೂಲಕ ಸ್ಫೋಟದ ಸಂಚು: ಆರೋಪಿಗಳು ದೆಹಲಿಯಲ್ಲಿ ಐಇಡಿ (IED) ಸ್ಫೋಟಕಗಳನ್ನು ತಯಾರಿಸಲು ಕಲಿಯುತ್ತಿದ್ದರು. ಜನನಿಬಿಡ ಪ್ರದೇಶಗಳಲ್ಲಿ ಆಟದ ಕಾರಿನೊಳಗೆ ಬಾಂಬ್ ಅಡಗಿಸಿಟ್ಟು ಸ್ಫೋಟಿಸಲು ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.

ಈ ಜಾಲವು ಕೇವಲ ಈ ಇಬ್ಬರಿಗೆ ಸೀಮಿತವಾಗಿಲ್ಲ. ಐಸಿಸ್ ಪ್ರಚಾರದಿಂದ ಪ್ರಭಾವಿತರಾಗಿರುವ ನಾಲ್ಕೈದು ಅಪ್ರಾಪ್ತ ವಯಸ್ಕರ ಮೇಲೆ ದೆಹಲಿ ವಿಶೇಷ ಘಟಕವು ನಿಗಾ ಇಟ್ಟಿದೆ. ಈ ಹದಿಹರೆಯದವರ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

About The Author

Leave a Reply