

ಹೈದರಾಬಾದ್ : ಮದುವೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿಗೆ ಎಚ್ಐವಿ ಸೋಂಕಿತ ರಕ್ತವನ್ನು ಬಲವಂತವಾಗಿ ಇಂಜೆಕ್ಷನ್ ಮೂಲಕ ಚುಚ್ಚಿದ್ದು, ಇದರಿಂದಾಗಿ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆರೋಪಿ ಮನೋಹರ್ ಮತ್ತು ಸಂತ್ರಸ್ತ ಯುವತಿ ಪರಸ್ಪರ ಸಂಬಂಧಿಕರಾಗಿದ್ದು,. ಅವರಿಬ್ಬರಿಗೂ ಮದುವೆ ಮಾಡಿಸಬೇಕು ಎಂದು ಪೋಷಕರು ನಿರ್ಧರಿಸಿದ್ದರು. ಆದರೆ, ಆರೋಪಿಯ ಪೋಷಕರು ಎಚ್ಐವಿ ಪೀಡಿತರಾಗಿದ್ದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಯುವತಿಯ ಪೋಷಕರು, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮನೋಹರ್ನನ್ನು ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಮನೋಹರ್ ಕೂಡ ಎಚ್ಐವಿ ಪಾಸಿಟಿವ್ ಎಂಬುದು ದೃಢಪಟ್ಟಿತ್ತು. ಹಾಗಾಗಿ ಯುವತಿ ಮದುವೆ ಬೇಡ ಎಂದು ನಿರಾಕರಿಸಿದ್ದಳು.

ಇದರಿಂದ ಕೋಪಗೊಂಡ ಮನೋಹರ್, ಮಾರ್ಚ್ 11 ರಂದು ಯುವತಿಯ ಮನೆಗೆ ನುಗ್ಗಿ ತನ್ನ ದೇಹದಲ್ಲಿದ್ದ ಎಚ್ಐವಿ ಪೀಡಿತ ರಕ್ತವನ್ನು ಆಕೆಗೆ ಬಲವಂತವಾಗಿ ಇಂಜೆಕ್ಷನ್ ಮೂಲಕ ಚುಚ್ಚಿದ್ದನು. ಈ ಘಟನೆಯ ಬಗ್ಗೆ ಆಕೆ ಕುಟುಂಬಕ್ಕೆ ತಿಳಿಸಿರಲಿಲ್ಲ. ಮರುದಿನ ಆಕೆಗೆ ದೇಹದಲ್ಲಿ ನೋವು ಮತ್ತು ತೀವ್ರ ಜ್ವರ ಕಾಣಿಸಿಕೊಂಡಿದ್ದು, ಕುಟುಂಬ ಸದಸ್ಯರು ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ದರು. ಆಗ ಆಕೆಯ ಮುಂಗೈಯಲ್ಲಿ ಕಪ್ಪಾಗಿ ಹೆಪ್ಪುಗಟ್ಟಿರುವುದನ್ನು ಗಮನಿಸಿದ ವೈದ್ಯರು, ಏನಾಗಿತ್ತು ಎಂದು ಪ್ರಶ್ನಿಸಿದಾಗ ಆಕೆ ನಡೆದ ಸಂಗತಿ ತಿಳಿಸಿದ್ದಳು. ಈ ಘಟನೆಯ ಬಳಿಕ ಆರೋಪಿ ಮನೋಹರ್ ನನ್ನು ಪೊಲೀಸರು ಬಂಧಿಸಿದ್ದರು.
ಘಟನೆ ನಡೆದು ಸುಮಾರು ಒಂದು ತಿಂಗಳ ಬಳಿಕ ಏಪ್ರಿಲ್ 10 ರಂದು ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಕುಟುಂಬದ ಸದಸ್ಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಕಳಂಕ ಮತ್ತು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಆಘಾತದಿಂದ ಹೊರಬರಲು ಸಾಧ್ಯವಾಗದೆ ಆಕೆ ಈ ನಿರ್ಧಾರ ಕೈಗೊಂಡಿದ್ದಾಳೆ ಎಂಬುದಾಗಿ ಡೆತ್ ನೋಟ್ನ್ನು ಆಕೆ ಬರೆದಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.








