

ಮುಡಿಪು: ದಾನಿಗಳ ಸಹಕಾರವೇ ಆಧಾರವಾಗಿರುವ ಭಾರತಿ ಅನುದಾನಿತ ಶಾಲೆ, ಮುಡಿಪು ಕುರ್ನಾಡಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ, ಪೆನ್ನು ಹಾಗೂ ಬಳಪ ವಿತರಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ.
ಕನ್ನಡ ಜಾಗೃತಿ ಸಮಿತಿಯ ಸದಸ್ಯರೂ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ, ಸಾಮಾಜಿಕ ಟ್ರಸ್ಟ್ನ ನೆರವು ಹಾಗೂ ಖ್ಯಾತ ವ್ಲಾಗರ್ ಸಲಾಂ ಸಮ್ಮಿ ಅವರ ಸಹಯೋಗದೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. ದಾನಿಗಳ ಈ ಕೊಡುಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.


ಪ್ರಸ್ತುತ ಶಾಲೆಯಲ್ಲಿ ಸುಮಾರು 70 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಲ್ಲಿ ಅಲೆಮಾರಿ ಜನಾಂಗದ ಟೆಂಟ್ ಮನೆಗಳಲ್ಲಿ ವಾಸಿಸುವ 25ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವಿಶೇಷ ಮಹತ್ವ ಪಡೆದಿದೆ.
ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭಗೊಂಡಿರುವ ಈ ಶಿಕ್ಷಣ ಸಂಸ್ಥೆ ಹಲವು ದಶಕಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾದಾನ ಮಾಡುತ್ತಾ ಬಂದಿದೆ. ಅನುದಾನಿತ ಶಾಲೆಯಾಗಿರುವ ಕಾರಣ ಸರ್ಕಾರಿ ಶಾಲೆಗಳಂತೆ ಉಚಿತ ಪುಸ್ತಕಗಳ ವ್ಯವಸ್ಥೆ ಲಭ್ಯವಾಗದ ಹಿನ್ನೆಲೆ, ದಾನಿಗಳ ಸಹಕಾರದಿಂದ ಈ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗಿದೆ.
ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದು ಎಂಬ ನಂಬಿಕೆಯಿಂದ ನಡೆದ ಈ ಪುಸ್ತಕ ವಿತರಣಾ ಕಾರ್ಯಕ್ರಮ ಕನ್ನಡ ಶಾಲೆಗಳ ಉಳಿವು ಹಾಗೂ ಬೆಳವಣಿಗೆಗೆ ಪ್ರೇರಣೆಯಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪಯಣಕ್ಕೆ ಹೊಸ ಉತ್ಸಾಹ ತುಂಬಿದೆ. ದಾನಿಗಳ ಸಾಮಾಜಿಕ ಕಳಕಳಿ ಮತ್ತು ಶಿಕ್ಷಣದ ಮೇಲಿನ ಬದ್ಧತೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಶಾಲಾ ಸಂಚಾಲಕರಾದ ಶ್ರೀ ಸುಭ್ರಮಣ್ಯ ಭಟ್ ಅದ್ಯಕ್ಷತೆ ವಹಿಸಿದ್ದರು. .ಖ್ಯಾತ ವ್ಲಾಗರ್ ಶಿಕ್ಷಣ ಪ್ರೇಮಿ ಉದ್ಯಮಿ ಸಲಾಂ ಸಮ್ಮಿ,
ಮಾಜಿ ನರೇಗಾ ಒಂಬುಡ್ಸುಮೆನ್ ದ.ಕ ಇದರ ಅದ್ಯಕ್ಷರಾದ ಶ್ರೀ.ಶೀನ ಶೆಟ್ಟಿ,ಜನಶಿಕ್ಷಣ ಟ್ರಸ್ಟ್ ಇದರ ನಿರ್ದೇಶಕರಾದ ಕೃಷ್ಣ ಮೂಲ್ಯ,ಜನಶಿಕ್ಷಣ ಟ್ರಸ್ಟ್ ಸಂಯೋಜರಾದ ಚೇತನ್,ಬಾಳೆಪುಣಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಆಯಿಷಾ ಬಾನು,ಕೊಳ್ನಾಡು ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾದ್ಯಕ್ಷೆ ಅಸ್ಮ ಹಸೈನಾರ್,ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯರಾದ ಸೆಮಿಮಾ,ನಿವೃತ್ತ ಶಿಕ್ಷರದಾ ಶ್ರೀ.ರಾಮಕೃಷ್ಣ ಭಟ್,ಅಂಗ್ಲ ಮಾದ್ಯಮ ಶಾಲೆಯ ಪ್ರಿನ್ಸಿಪಾಲರಾದ ಶ್ರೀಮತಿ ಶಕುಂತಲಾ ಶೆಟ್ಟಿ,ಮುಖ್ಯ ಶಿಕ್ಷಕಿ ಶ್ವೇತ ಬಳ್ಳಾಲ್,ಶ್ರೀ ಅಬೂಬಕ್ಕರ್ ಹೂಹಾಕುವ ಕಲ್ಲು, ಪತ್ರಕರ್ತ ವಿ.ಟಿ.ಪ್ರಸಾದ್ ಉಪಸ್ಥಿತರಿದ್ದರು. ಕನ್ನಡ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿ,ಅನಿತಾ ಟೀಚರ್ ಧನ್ಯವಾದ ತಿಳಿಸಿದರು.ಕಾರ್ಯಕ್ರಮವನ್ನು ಶಿಕ್ಷಕರಾದ ಹರೀಶ್ ಕುಮಾರ್ ನಿರ್ವಹಿಸಿದರು.






