

ಮಂಗಳೂರು: ಬಜ್ಪೆ ಬಳಿ ನಿರ್ಮಾಣವಾಗಲಿರುವ ಹಜ್ ಭವನಕ್ಕೆ ಅಲ್ಲಾಹನ ಹೆಸರಿನಲ್ಲಿ ಆತ್ಮಸಾಕ್ಷಿಯಾಗಿ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ದಾನ ಮಾಡಿದ ಕರಾವಳಿ ಜಿಲ್ಲೆಯ ಹೆಮ್ಮೆಯ ದಾನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜನಾಬ್ ಇನಾಯತ್ ಅಲಿ ರವರ ಹೆಸರು ಸರ್ಕಾರದ ಅಧಿಕೃತ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನಾಪತ್ತೆಯಾಗಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಹಾಗೂ ದ,ಕ ಜಿಲ್ಲಾ ಇಂಡಿಯನ್ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ ಅವರು, ಸರ್ಕಾರದ ಈ ನಡೆಯನ್ನು ಖಂಡಿಸಿದ್ದಾರೆ.
ಹಜ್ ಭವನಕ್ಕೆ ಎಂಟು ಕೋಟಿ ಜಾಗ ಕೊಟ್ಟಿದವರ ಹೆಸರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ರವರ ಆಮಂತ್ರಣ ಪತ್ರಿಕೆಯಲ್ಲಿ ಮಾಯವಾಗಿದೆ. ಯಾವ ದುರುದ್ದೇಶದಿಂದ ಮಾಡಿದ್ದಾರೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಒಬ್ಬ ದಾನ ಮಾಡಿದವರನ್ನೇ ಕೈಬಿಟ್ಟ ಸರ್ಕಾರ, ಇದಕ್ಕಿಂತ ದೊಡ್ಡ ದುರಂತ ಯಾವುದು ಅಯ್ಯಾ?” ಎಂದು ರಿಯಾಝ್ ಹರೇಕಳ ಪ್ರಶ್ನಿಸಿದ್ದಾರೆ.


ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಆಪ್ತ ಸ್ನೇಹಿತರನ್ನೇ ಕೈಬಿಟ್ಟ ಸರ್ಕಾರ, ಅದರಲ್ಲಿ ಹಜ್ ಭವನಕ್ಕೆ ಬರೋಬ್ಬರಿ 8 ಕೋಟಿ ರೂಪಾಯಿಯ ಜಾಗ ದಾನ ಮಾಡಿದವರಿಗೆ ಆಮಂತ್ರಣದಲ್ಲಿ ಜಾಗ ಇಲ್ಲವೇ? ಇದು ನಮ್ಮ ಕರಾವಳಿಯ ಮುಸ್ಲಿಂ ಸಮುದಾಯಕ್ಕೆ ನೋವಿನ ಸಂಗತಿಯಾಗಿದೆ” ಎಂದು ಹರೇಕಳ ಬೇಸರ ವ್ಯಕ್ತಪಡಿಸಿದ್ದಾರೆ.
ಬಡವರ ಸರದಾರನಿಗೆ ಅಗೌರವ ಸಲ್ಲದು
ಇನಾಯತ್ ಅಲಿ ಅವರು ಕೇವಲ ರಾಜಕಾರಣಿಯಲ್ಲ. ಅವರು ಕರಾವಳಿ ಜಿಲ್ಲೆಯ ಬಡವ ಮತ್ತು ನಿರ್ಗತಿಕರ ಸರದಾರ. ಜಾತಿ-ಮತ ಭೇದ ಎಂದು ನೋಡದ ವ್ಯಕ್ತಿ. ಅಲ್ಲಾಹನ ಭವನಕ್ಕೆ ತಮ್ಮ ಸ್ವಂತ ಜಾಗವನ್ನು ಆತ್ಮಸಾಕ್ಷಿಯಾಗಿ ನೀಡಿದ್ದಾರೆ. ಜನರ ಜೊತೆ ಪ್ರೀತಿ ಬೆಳೆಸುವ ಇಂತಹ ವ್ಯಕ್ತಿಗೇ ಗೌರವ ಇಲ್ಲವೇ? ಎಂದು ರಿಯಾಝ್ ಹರೇಕಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಜ್ ಭವನಕ್ಕೆ ಜಾಗ ನೀಡಿದವರಿಗೆ ಆಮಂತ್ರಣ ಪತ್ರಿಕೆಯಲ್ಲಿ ಜಾಗ ಇಲ್ಲವೇ? ಇಂತಹ ಜಾತಿ ಮತ ನೋಡದ, ಮಾನವೀಯತೆಯಿಂದ ಬದುಕುವ ವ್ಯಕ್ತಿಗೆ ಅಗೌರವ ತೋರುವುದು ಸರಕಾರ ಸರಿಯಲ್ಲ. ಇದು ಕರಾವಳಿಯ ಸಮಸ್ತ ಜನತೆಗೆ ಮಾಡಿದ ಅವಮಾನ” ಎಂದು ಅವರು ಹೇಳಿದ್ದಾರೆ.
ಆಮಂತ್ರಣ ಪತ್ರಿಕೆಯಲ್ಲಿ ಎಲ್ಲಾ ರಾಜಕೀಯ ಗಣ್ಯರ ಹೆಸರುಗಳಿದ್ದರೂ, ಈ ಪುಣ್ಯ ಕಾರ್ಯಕ್ಕೆ ಅಡಿಪಾಯವಾದ ದಾನಿಯ ಹೆಸರೇ ಇಲ್ಲದಿರುವುದು ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಸರ್ಕಾರ ಕೂಡಲೇ ಈ ತಪ್ಪನ್ನು ತಿದ್ದಿಕೊಂಡು ಇನಾಯತ್ ಅಲಿ ರವರಿಗೆ ಕಾರ್ಯಕ್ರಮದಲ್ಲಿ ಮೊದಲ ಆದ್ಯತೆಯ ಗೌರವ ನೀಡಬೇಕು ಎಂದು ರಿಯಾಝ್ ಹರೇಕಳ ಒತ್ತಾಯಿಸಿದ್ದಾರೆ.






