
ಮಂಗಳೂರು: ಇನ್ಸ್ಟಾಗ್ರಾಂನಲ್ಲಿ ಮತ್ತೊಬ್ಬಾಕೆಯ ಫೋಟೊಗೆ ಲೈಕ್ ಒತ್ತಿದ್ದಕ್ಕೆ ನಿಶ್ಚಿತಾರ್ಥಗೊಂಡ ಯುವತಿ ಕಿರಿಕಿರಿ ಮಾಡಿದಲೆಂದು ಮನನೊಂದು ದೈವಪಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದಲ್ಲಿ ನಡೆದಿದೆ.



ಚೇತನ್(25) ಆತ್ಮಹತ್ಯೆ ಮಾಡಿಕೊಂಡಿರುವ ದೈವಪಾತ್ರಿ. ಚೇತನ್ಗೆ ಮಂಗಳೂರು ಮೂಲದ ಚೈತನ್ಯಾ ಎಂಬ ಯುವತಿ ಇನ್ಸ್ಟಾಗ್ರಾಂನಲ್ಲಿ ಪರಿಚಿತಳಾಗಿದ್ದಾಳೆ. ಬಳಿಕ ಇಬ್ಬರೂ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, 8ತಿಂಗಳ ಹಿಂದೆ ವಿವಾಹ ನಿಶ್ಚಿತಾರ್ಥವಾಗಿತ್ತು. ಜ.21ರಂದು ಬೆಳಗ್ಗೆ 11ಗಂಟೆಗೆ ಚೇತನ್ ಮಾತ್ರ ಮನೆಯಲ್ಲಿದ್ದಿದ್ದು, ಆತನ ತಾಯಿ ಪುಷ್ಪ ತನ್ನ ತವರು ಮನೆಗೆ ತೆರಳಿದ್ದರು.
ಈ ವೇಳೆ ಚೈತನ್ಯಾ ಪುಷ್ಪಾರಿಗೆ ಕರೆ ಮಾಡಿ, “ನಾನು ನಿಮ್ಮ ಮನೆಗೆ ಬಂದಿದ್ದೇನೆ, ಚೇತನ್ ಮನೆಯಲ್ಲಿ ಮಲಗಿದ್ದು ಎದ್ದೇಳುತ್ತಿಲ್ಲ ತಕ್ಷಣ ಮನೆಗೆ ಬನ್ನಿ” ಎಂದಿದ್ದಾಳೆ. ಪುಷ್ಪಾ 11.30ಗಂಟೆಗೆ ಬಂದು ನೋಡಿದಾಗ ಚೇತನ್ ಮಲಗಿದ ಸ್ಥಿತಿಯಲ್ಲಿದ್ದು, ಎಬ್ಬಿಸಲು ಪ್ರಯತ್ನಿಸಿದರೂ ಏಳಲಿಲ್ಲ. ಈ ವೇಳೆ ಮೇಲ್ಛಾವಣಿಯಲ್ಲಿ ಲುಂಗಿಯಿಂದ ಮಾಡಿದ ಕುಣಿಕೆ ಕಂಡು ಬಂದಿದೆ. ಈ ಬಗ್ಗೆ ಚೈತನ್ಯಾಳಲ್ಲಿ ಪ್ರಶ್ನಿಸಿದಾಗ, “ಚೇತನ್ ಇನ್ಸ್ಟಾಗ್ರಾಂನಲ್ಲಿ ಹುಡುಗಿಯೊಬ್ಬಳಿಗೆ ಲೈಕ್ ಮಾಡಿರುವುದನ್ನು ಪ್ರಶ್ನಿಸಲು ತಾನು ಮನೆಗೆ ಬಂದಿರುವುದಾಗಿ, ಈ ವಿಚಾರದ ಬಗ್ಗೆ ಗಲಾಟೆಯ ಇದರಿಂದ ಬೇಸರಗೊಂಡ ಚೇತನ್ ನೇಣುಬಿಗಿದಿದ್ದಾರೆ” ಎಂದು ತಿಳಿಸಿದ್ದಾಳೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.