Visitors have accessed this post 416 times.
ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟು ಎಂಬಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಬೈಕಿನಲ್ಲಿ ಬಂದ ಅಪರಿಚಿತರು ಸರ ಸೆಳೆದು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಅನಂತಪದ್ಮನಾಭ ಮತ್ತು ತಂಡ ಬಂಧಿಸಲು ಸಫಲವಾಗಿದೆ. ಸಚಿನ್ ಮತ್ತು ಅಶೋಕ್ ಬಂಧಿತ ಆರೋಪಿಗಳು.
ಡಿ.14ರಂದು ಮಧ್ಯಾಹ್ನ ಬೈಕಿನಲ್ಲಿ ಬಂದ ಇಬ್ಬರು, ಅಂಗಡಿಗೆ ಬಂದು ವ್ಯಾಪಾರ ಮಾಡಿದ ಬಳಿಕ ಮಹಿಳೆಯ ಕುತ್ತಿಗೆಯಲ್ಲಿದ್ದ 1.5 ಪವನ್ ತೂಕ ಅಂದಾಜು 50 ಸಾವಿರ ರೂ ಬೆಲೆಯ ಸರ ಸೆಳೆದು ಪರಾರಿಯಾಗಿದ್ದರು. ಪ್ರಕರಣವನ್ನು ಪತ್ತೆ ಹಚ್ಚಲು ಎಸ್ಪಿ ರಿಷ್ಯಂತ್, ನಿರ್ದೇಶನದಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಹಾಗೂ ಡಿವೈಎಸ್ಪಿ ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ನಗರ ಠಾಣೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ ಕೆ.ವಿ, ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ರಾಮಕೃಷ್ಣ, ಕಲೈಮಾರ್ ಪಿ, ಒಳಗೊಂಡ ಸಿಬ್ಬಂದಿಗಳಾದ ಎಚ್.ಸಿ ಇರ್ಷಾದ್ ಪಿ , ರಾಜೇಶ್ ಎಸ್ , ಗಣೇಶ್ ಎನ್, ಪಿಸಿಗಳಾದ ಮೋಹನ ವೈ ಎ ವಿವೇಕ್ ಕೆ ಅವರ ಒಂದು ತಂಡವನ್ನು ರಚಿಸಿ ಶುಕ್ರವಾರ ಆರೋಪಿಗಳಾದ ಮಂಗಳೂರಿನ ಬೈಕಂಪಾಡಿ ನಿವಾಸಿ ಅಶೋಕ (34) ಮಂಗಳೂರಿನ ದಂಬೇಲ್ ನಿವಾಸಿ ಸಚಿನ್ (34) ಎಂಬಿಬ್ಬರನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಅವರಿಂದ ಸುಲಿಗೆ ಮಾಡಿದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಸ್ವಾಧೀನ ಪಡೆಸಲಾಗಿದೆ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ಒಳಪಡಿಸಲಾಗಿದೆ. ತಂಡಕ್ಕೆ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ.