Visitors have accessed this post 254 times.
ಬೆಳ್ತಂಗಡಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳ ನುಗ್ಗಿನ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ನಗದು ಹಣ ಎಗರಿಸಿ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಮುಸ್ತಾಪ್ (30) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಮುಸ್ತಫಾ ಅವರು ಸೋಮವಾರ ತನ್ನ ಗೂಡ್ಸ್ ವಾಹನದ ಸರ್ವಿಸ್ ಗಾಗಿ ಚಿಕ್ಕಮಗಳೂರಿಗೆ ತೆರಳಿದ್ದವರು, ಆ ದಿನ ಅಲ್ಲಿಯೇ ತಂಗಿದ್ದಾರೆ. ಅವರ ಬೆಳ್ತಂಗಡಿಯ ಮನೆಯಲ್ಲಿದ್ದ ಅವರ ತಾಯಿ ಕೂಡಾ ಆ ದಿನ ರಾತ್ರಿ ಮನೆಗೆ ಬೀಗ ಹಾಕಿ ಹತ್ತಿರದಲ್ಲಿರುವ ಮುಸ್ತಫಾ ಅವರ ಚಿಕ್ಕಪ್ಪನ ಮನೆಗೆ ತೆರಳಿದ್ದರು. ಮರುದಿನ ಅಂದರೆ ಮಂಗಳವಾರ ಬೆಳಿಗ್ಗೆ ಮುಸ್ತಾಫ್ ಅವರ ತಾಯಿ ಮನೆಗೆ ಬಂದು ನೋಡಿದಾಗ ಮನೆಯ ಹಂಚು ತೆರೆದು ಒಳನುಗ್ಗಿದ ಕಳ್ಳರು ಮನೆಯ ರೂಮಿನ ಕಪಾಟಿನಲ್ಲಿರಿಸಿದ್ದ 1.71 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 1.20 ಲಕ್ಷ ರೂಪಾಯಿ ನಗದು ಹಣವನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮುಸ್ತಾಫ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.